ಪನ್ನೂ ಹತ್ಯೆ ಸಂಚು | ಭಾರತ– ಅಮೆರಿಕ ಸಂಬಂಧಕ್ಕೆ ತೊಂದರೆಯಿಲ್ಲ: ಜೈಶಂಕರ್‌ ನವದೆಹಲಿ: ಖಾಲಿಸ್ತಾನಿ ಪ್ರತ್ಯೇಕತವಾದಿ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನೂ ಅವರ ಹತ್ಯೆಗೆ ರೂಪಿಸಲಾಗಿತ್ತು ಎನ್ನಲಾದ ಸಂಚಿಗೆ ಭಾರತೀಯ ಅಧಿಕಾರಿ ನಂಟಿತ್ತು ಎಂದು ಅಮೆರಿಕ ಮಾಡಿರುವ ಆರೋಪದಿಂದ ಉಭಯ ರಾಷ್ಟ್ರಗಳ ಸಂಬಂಧಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಭಾರತ ಮತ್ತು ಅಮೆರಿಕ ಸಂಬಂಧ ದೃಢವಾಗಿವೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ. ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಜೈಶಂಕರ್‌ ಅವರು, ‘ಅಮೆರಿಕವು ಕೆಲವೊಂದು ಮಾಹಿತಿಗಳನ್ನು ನಮ್ಮ ಗಮನಕ್ಕೆ ತಂದಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಈ ಪ್ರಕರಣದಿಂದ ಉಭಯ ರಾಷ್ಟ್ರಗಳ ಸಂಬಂಧಗಳ ಮೇಲೆ ಪರಿಣಾಮ ಬೀರಲಿದೆ ಎಂದು ನಾನು ಭಾವಿಸುವುದಿಲ್ಲ’ ಎಂದರು. ಪನ್ನೂ, ಕೆನಡಾ ಮತ್ತು ಅಮೆರಿಕದ ದ್ವಿಪೌರತ್ವವನ್ನು ಹೊಂದಿದ್ದಾನೆ. ನವೆಂಬರ್‌ನಲ್ಲಿ ಈತನ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಆದರೆ ಅದು ವಿಫಲವಾಗಿತ್ತು. ಆತನ ಹತ್ಯೆಗೆ ಸಂಚು ರೂಪಿಸಿದ್ದಕ್ಕಾಗಿ ಭಾರತೀಯ ಅಧಿಕಾರಿಯನ್ನು ಹೆಸರಿಸಿ ಅಮೆರಿಕ ಆರೋಪ ಮಾಡಿತ್ತು. ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಭಾರತ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.