ನಿಜ್ಜರ್ ಪ್ರಕರಣ ಕುರಿತು ನಿರ್ದಿಷ್ಟ ಪುರಾವೆ ಇಲ್ಲ: ಕೇಂದ್ರ ನವದೆಹಲಿ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾದಿಂದ ತನಗೆ ಯಾವುದೇ ನಿರ್ದಿಷ್ಟ ಪುರಾವೆ ಅಥವಾ ಮಾಹಿತಿ ದೊರೆತಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ಈ ಹತ್ಯೆಗೆ ಸಂಬಂಧಿಸಿದಂತೆ ಮೂವರು ಭಾರತೀಯರನ್ನು ಬಂಧಿಸಲಾಗಿದೆ ಎಂದು ಕೆನಡಾ ಪೊಲೀಸರು ಹೇಳಿದ ಕೆಲವೇ ದಿನಗಳಲ್ಲಿ ಕೇಂದ್ರ ಈ ಪ್ರತಿಕ್ರಿಯೆ ನೀಡಿದೆ. ಆದರೆ ಬಂಧನದ ಬಗ್ಗೆ ಕೆನಡಾದಿಂದ ಮಾಹಿತಿ ದೊರೆತಿರುವುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ‘ಕೆನಡಾದ ಅಧಿಕಾರಿಗಳು ಇದುವರೆಗೆ ಯಾವುದೇ ನಿರ್ದಿಷ್ಟ ಅಥವಾ ಸಂಬಂಧಪಟ್ಟ ಪುರಾವೆಯನ್ನು, ಮಾಹಿತಿಯನ್ನು ಹಂಚಿಕೊಂಡಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಹೀಗಾಗಿ, ಈ ವಿಚಾರವಾಗಿ ಎಲ್ಲ ಆಯಾಮಗಳನ್ನು ಅರಿಯುವ ಮೊದಲೇ ಒಂದು ತೀರ್ಮಾನಕ್ಕೆ ಬರುವ ಕೆಲಸ ಆಗುತ್ತಿದೆ ಎಂದು ನಾವು ಹೇಳುತ್ತಿದ್ದೇವೆ’ ಎಂದು ಅವರು ವಾರದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಮೂವರು ಭಾರತೀಯರ ಮೇಲೆ ಕೆನಡಾದ ಅಧಿಕಾರಿಗಳು ನಿಜ್ಜರ್ ಹತ್ಯೆಯ ಆರೋಪ ಹೊರಿಸಿದ್ದಾರೆ. ಈ ಮೂವರು ವಿದ್ಯಾರ್ಥಿ ವೀಸಾ ಪಡೆದು ಕೆನಡಾ ಪ್ರವೇಶಿಸಿದ್ದರು ಎಂದು ವರದಿಯಾಗಿದೆ. ‘ಇಲ್ಲಿ ರಾಜಕೀಯ ಹಿತಾಸಕ್ತಿ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟ. ಪ್ರತ್ಯೇಕತಾವಾದಿಗಳು, ತೀವ್ರಗಾಮಿಗಳು ಮತ್ತು ಹಿಂಸೆಯ ಪರವಾಗಿ ಇರುವವರಿಗೆ ಕೆನಡಾದಲ್ಲಿ ರಾಜಕೀಯ ಸ್ಥಳಾವಕಾಶ ಒದಗಿಸಲಾಗುತ್ತಿದೆ ಎಂಬುದನ್ನು ನಾವು ಹಿಂದಿನಿಂದಲೂ ಹೇಳುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.