ದೆಹಲಿ: ಕ್ರಿಕೆಟ್‌ ಪಂದ್ಯದ ವೇಳೆ ಜಗಳ ತಪ್ಪಿಸಲು ಹೋದ ಯುವಕನ ಹತ್ಯೆ ನವದೆಹಲಿ: ಕ್ರಿಕೆಟ್‌ ಪಂದ್ಯದ ವೇಳೆ ಸಹೋದರ ಮತ್ತು ಇತರರ ನಡುವೆ ಏರ್ಪಟ್ಟ ಜಗಳವನ್ನು ತಪ್ಪಿಸಲು ಹೋದ 21 ವರ್ಷದ ಯುವಕನ ಹತ್ಯೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ. ವಿಶಾಲ್‌ ಕುಮಾರ್‌ ಮೃತ ಯುವಕ. ಹಲ್ಲೆಯಿಂದಾಗಿ ದೇಹದ ಆಂತರಿಕ ಭಾಗಗಳಲ್ಲಿ ಉಂಟಾದ ಗಾಯಗಳಿಂದಾಗಿ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಮೂವರು ಆರೋಪಿಗಳನ್ನು ಗುರುತಿಸಲಾಗಿದೆ, ಅವರ ಸೆರೆಗೆ ತಂಡ ರಚಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ. ವಿಶಾಲ್‌ ಕಿರಿಯ ಸಹೋದರ ಕುನಾಲ್ ಮನೆಯ ಬಳಿ ಕ್ರಿಕೆಟ್ ಆಡಲು ಹೋಗಿದ್ದರು. ಈ ವೇಳೆ ಕುನಾಲ್ ಮತ್ತು ಇತರರ ನಡುವೆ ಗಲಾಟೆ ನಡೆದಿದೆ. ಕುನಾಲ್ ಸಹೋದರ ವಿಶಾಲ್‌ನನ್ನು ಮೈದಾನಕ್ಕೆ ಕರೆದಿದ್ದ. ಈ ವೇಳೆ ನಡೆದ ಗಲಾಟೆಯಲ್ಲಿ ವಿಶಾಲ್‌ ಅವರಿಗೆ ಬ್ಯಾಟ್‌ನಿಂದ ಥಳಿಸಲಾಗಿದೆ. ಗಾಯಗೊಂಡ ವಿಶಾಲ್‌ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.