ಲೋಕಸಭಾ ಚುನಾವಣೆ: ಬಿಜೆಪಿಯ ಸ್ವರ್ಣ್ ಸಲಾರಿಯಾ ಎಎಪಿ ಸೇರ್ಪಡೆ ಚಂಡೀಗಢ: ಪಂಜಾಬ್‌ನ ಬಿಜೆಪಿ ಮುಖಂಡ ಸ್ವರ್ಣ್ ಸಲಾರಿಯಾ ಅವರು ಸೋಮವಾರ ಎಎಪಿಗೆ ಸೇರ್ಪಡೆಯಾದರು. ಅವರಿಗೆ ಬಿಜೆಪಿ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿತ್ತು. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಲಾರಿಯಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ಕಳೆದ ತಿಂಗಳು ಬಿಜೆಪಿಯು ಮಾಜಿ ಶಾಸಕ ದಿನೇಶ್ ಬಬ್ಬು ಅವರಿಗೆ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಿಸಿತ್ತು. ಆಗಿನಿಂದ ಪಕ್ಷದ ನಾಯಕರ ವಿರುದ್ಧ ಸಲಾರಿಯಾ ಬಂಡೆದ್ದಿದ್ದರು. ಸಲಾರಿಯಾ ಅವರು ಮಾಜಿ ಸಂಸದ ವಿನೋದ್ ಖನ್ನಾ ನಿಧನದ ನಂತರ ನಡೆದಿದ್ದ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ಅವರು ಕಾಂಗ್ರೆಸ್‌ನ ಸುನಿಲ್ ಜಾಖಡ್ ವಿರುದ್ಧ ಸೋಲು ಅನುಭವಿಸಿದ್ದರು. ನಂತರ ಬಿಜೆಪಿ ಸೇರಿದ್ದ ಸುನಿಲ್ ಜಾಖಡ್, ಈಗ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. 2022ರ ವಿಧಾನಸಭೆ ಚುನಾವಣೆಯಲ್ಲಿ ಆನಂದಪುರ ಕ್ಷೇತ್ರದಿಂದ ಶಿರೋಮಣಿ ಅಕಾಲಿ ದಳ–ಬಿಎಸ್‌ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ನಿತಿನ್ ನಂದಾ ಅವರು ಕೂಡ ಎಎಪಿಗೆ ಸೇರ್ಪಡೆಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.