ಗಣಿಗಾರಿಕೆ ಮುಂದುವರಿಕೆ ನಮ್ಮ ಆದೇಶದ ತಿರಸ್ಕಾರ: ಸುಪ್ರೀಂ ಕೋರ್ಟ್‌ ನವದೆಹಲಿ: ನಿರ್ಣಾಯಕ ಹುಲಿ ಸಂರಕ್ಷಿತ ಪ್ರದೇಶಗಳ ಗಡಿಯಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ಮುಂದುವರೆಸುವುದು ಕಳೆದ ವರ್ಷದ ಏಪ್ರಿಲ್‌ನ ತನ್ನ ಆದೇಶದ ನಿಂದನೆ ಮಾಡಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ. ಸುಪ್ರೀಂ ಕೋರ್ಟ್ ತನ್ನ ಏಪ್ರಿಲ್‌ 26, 2023ರ ತೀರ್ಪಿನಲ್ಲಿ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಅಭಯಾರಣ್ಯದೊಳಗೆ ಮತ್ತು ಅವುಗಳ ಗಡಿಯಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ಅನುಮತಿಸುವುದಿಲ್ಲ ಎಂದು ನಿರ್ದೇಶಿಸಿತ್ತು. ಏಪ್ರಿಲ್‌ 26ರ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾದ ಎಲ್ಲಾ ಗಣಿಗಾರಿಕೆ ಚಟುವಟಿಕೆಗಳನ್ನು ನಿಲ್ಲಿಸಲು ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶನವನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ. ಆರ್‌ ಗವಾಯಿ ಅವರ ನೇತೃತ್ವದ ಪೀಠವು ನಡೆಸುತ್ತಿದೆ. ‘ಏ.26ರ ನಮ್ಮ ತೀರ್ಪಿನಲ್ಲಿ ನಾವು ಎಲ್ಲಾ ಸುರಕ್ಷಿತ ಪ್ರದೇಶಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಿದ್ದೇವೆ. ಈ ತೀರ್ಪು ಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅನ್ವಯಿಸುತ್ತದೆ. ಆದರೂ ಈ ಪ್ರದೇಶಗಳ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮುಂದುವರೆಸುವುದು ನಮ್ಮ ಆದೇಶವನ್ನು ತಿರಸ್ಕರಿಸುತ್ತದೆ’ ಎಂದು ಪೀಠವು ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.