ಸಿಎಎ: ರಾಜ್ಯ ಮಟ್ಟದ ಸಮಿತಿ ರಚಿಸಿದ ತ್ರಿಪುರಾ ಸರ್ಕಾರ ಅಗರ್ತಲ: ಪೌರತ್ವ ತಿದ್ದುಪಡಿ ಕಾಯ್ದೆ–2019ರ (ಸಿಎಎ) ಅಡಿಯಲ್ಲಿ ಪೌರತ್ವ ನೀಡಲು ತ್ರಿಪುರಾ ಸರ್ಕಾರವು, ಜನಗಣತಿ ವಿಭಾಗದ ನಿರ್ದೇಶಕರ ಅ‌ಧ್ಯಕ್ಷತೆಯಲ್ಲಿ 6 ಜನ ಸದಸ್ಯರನ್ನೊಳಗೊಂಡ ರಾಜ್ಯ ಮಟ್ಟದ ಸಮಿತಿ ರಚಿಸಿದೆ. ‘ಕೇಂದ್ರ ಗೃಹ ಇಲಾಖೆಯ ನಿರ್ದೇಶನದಂತೆ ರಾಜ್ಯ ಮಟ್ಟದ ಸಮಿತಿಯು ಸಿಎಎ ಅಡಿಯಲ್ಲಿ ಪೌರತ್ವ ನೀಡಲಿದೆ’ ಎಂದು ಜನಗಣತಿ ವಿಭಾಗದ ನಿರ್ದೇಶಕ ರಬೀಂದ್ರ ರಿಯಂಗ್‌ ತಿಳಿಸಿದ್ದಾರೆ. ‘ಪೌರತ್ವ ನೋಂದಣಿಯ ಅರ್ಜಿಗಳನ್ನು ಸ್ವೀಕರಿಸಿ, ಪರಿಶೀಲನೆ ನಡೆಸಿ ರಾಜ್ಯ ಮಟ್ಟದ ಸಮಿತಿಗೆ ಕಳುಹಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವಂತೆ ಎಲ್ಲ ಜಿಲ್ಲೆಗಳ ಮ್ಯಾಜಿಸ್ಟ್ರೇಟ್‌ಗಳಿಗೆ ಸೂಚನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. 2014 ಡಿಸೆಂಬರ್‌ 31 ಮತ್ತು ಅದರ ಮೊದಲು ಬಾಂಗ್ಲದೇಶ, ಪಾಕಿಸ್ತಾನ ಮತ್ತು ಅಫ್ಗನಿಸ್ತಾನದಿಂದ ವಲಸೆ ಬಂದು ಭಾರತದಲ್ಲಿ ನೆಲೆಸಿರುವ ಹಿಂದೂ, ಸಿಖ್‌, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರೈಸ್ತ ಧರ್ಮದವರಿಗೆ ಭಾರತದ ಪೌರತ್ವ ನೀಡುವ ಸಲುವಾಗಿ 2019ರಲ್ಲಿ ನೂತನ ಪೌರತ್ವ ಕಾಯ್ದೆಯನ್ನು ರೂಪಿಸಲಾಗಿತ್ತು. 6ನೇ ವಿಧಿಯಡಿ ಬರುವ ಪ್ರದೇಶಗಳಿಗೆ (ಬುಡಕಟ್ಟು ಜನರಿರುವ ಪ್ರದೇಶ) ಸಿಎಎಯಿಂದ ವಿನಾಯಿತಿ ನೀಡಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.