ಹೇಮಾ ಮಾಲಿನಿಗೆ ಅವಮಾನ ಆರೋಪ: ಸುರ್ಜೆವಾಲಾ, ಖರ್ಗೆಗೆ ಚುನಾವಣಾ ಆಯೋಗ ನೋಟಿಸ್ ನವದೆಹಲಿ: ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರ ವಿರುದ್ಧ ಗೌರವವಿಲ್ಲದ, ಅನಾಗರಿಕ ಹಾಗೂ ಅಸಭ್ಯ ಪದ ಬಳಸಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಗೆ ಚುನಾವಣಾ ಆಯೋಗ ಮಂಗಳವಾರ ಶೋಕಾಸ್ ನೋಟಿಸ್‌ ನೀಡಿದೆ. ಅಲ್ಲದೆ, ಸಾರ್ವಜನಿಕ ಭಾಷಣದ ಸಮಯದಲ್ಲಿ ಮಹಿಳೆಯರ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವ ಬಗ್ಗೆ ತನ್ನ ಸಲಹೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರತಿಕ್ರಿಯೆ ನೀಡಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ನೋಟಿಸ್ ನೀಡಿದೆ. ಏ.11ರ ಸಂಜೆಯೊಳಗೆ ಉತ್ತರಿಸಬೇಕು ಎಂದು ಸುರ್ಜೇವಾಲ ಅವರಿಗೂ ಏ.12ರ ಸಂಜೆಯೊಳಗೆ ಉತ್ತರಿಸಬೇಕು ಎಂದು ಖರ್ಗೆ ಅವರಿಗೂ ಸೂಚಿಸಿದೆ. ನಟಿ, ಸಂಸದೆ ಹೇಮಮಾಲಿನ ವಿರುದ್ಧ ಸುರ್ಜೇವಾಲ ಹೇಳಿದ್ದಾರೆ ಎನ್ನಲಾದ ವಿಡಿಯೊವನ್ನು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಚುನಾವಣಾ ಆಯೋಗಕ್ಕೂ ಬಿಜೆಪಿ ದೂರು ನೀಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.