ಮರಾಠರನ್ನು ವಂಚಿಸಿದ ಮಹಾರಾಷ್ಟ್ರ ಸರ್ಕಾರ: ಮನೋಜ್ ಜರಾಂಗೆ ಆರೋಪ ಲಾತೂರ್ : ಮೀಸಲಾತಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಮರಾಠರನ್ನು ವಂಚಿಸಿದೆ ಎಂದು ಹೋರಾಟಗಾರ ಮನೋಜ್ ಜರಾಂಗೆ ಆರೋಪಿಸಿದ್ದು, ಮೀಸಲಾತಿ ಬೇಡಿಕೆಯನ್ನು ಪ್ರಾಮಾಣಿಕವಾಗಿ ಬೆಂಬಲಿಸುವ ರಾಜಕೀಯ ನಾಯಕರನ್ನು ಮಾತ್ರ ಸಮುದಾಯವು ಬೆಂಬಲಿಸಲಿದೆ ಎಂದು ಘೋಷಿಸಿದ್ದಾರೆ. ಲಾತೂರ್ ಜಿಲ್ಲೆಯ ಉದ್ಗೀರ್‌ನಲ್ಲಿ ಬುಧವಾರ ‘ಸಕಲ ಮರಾಠ ಸಮಾಜ’ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮರಾಠರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ವಿಧಾನಸಭೆಯು ಅಂಗೀಕರಿಸಿರುವ ಮಸೂದೆಯು ಕಾನೂನಿನ ವ್ಯಾಪ್ತಿಯಡಿ ಮಾನ್ಯವಾಗುವುದಿಲ್ಲ’ ಎಂದು ತಿಳಿಸಿದರು. ‘ಸರ್ಕಾರವು ಮರಾಠರನ್ನು ವಂಚಿಸಿದ್ದು, ನಾವು ಬಯಸದ ರೀತಿ ಮಠಾಠ ಮೀಸಲಾತಿ ಮಸೂದೆ ತಂದಿದೆ. ಇದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಕುಟುಂಬದ ವಂಶವೃಕ್ಷ ಆಧರಿಸಿ ಒಬಿಸಿ ಅಡಿ ನಮಗೆ ಮೀಸಲಾತಿ ನೀಡಬೇಕು’ ಎಂದು ಅವರು ಆಗ್ರಹಿಸಿದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮರಾಠ ಮೀಸಲಾತಿ ಹೋರಾಟವನ್ನು ಯಾವ ರೀತಿಯಲ್ಲಾದರೂ ಸರಿ ದಮನ ಮಾಡಲು ಬಯಸಿದ್ದಾರೆ ಎಂದು ಆರೋಪಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.