ಯೆಸ್‌ ಬ್ಯಾಂಕ್‌ಗೆ ₹400 ಕೋಟಿ ವಂಚನೆ: ಕೊಚ್ಚಿಯಲ್ಲಿ ಆರೋಪಿ ಅಜಿತ್ ಮೆನನ್ ಬಂಧನ ಮುಂಬೈ: ಯೆಸ್‌ ಬ್ಯಾಂಕ್‌ಗೆ ₹400 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೂರ್ಸ್ ಅಂಡ್ ಟ್ರಾವೆಲ್ಸ್ ಕಂಪನಿ ಕಾಕ್ಸ್ ಅಂಡ್ ಕಿಂಗ್ಸ್ ಮಾಲೀಕರ ಆಪ್ತನನ್ನು ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗವು(ಇಒಡಬ್ಲ್ಯು) ಬಂಧಿಸಿದೆ. ಲಂಡನ್‌ನಿಂದ ಆಗಮಿಸಿದ ಬ್ರಿಟನ್ ನಾಗರಿಕ ಅಜಿತ್ ಮೆನನ್(67) ಎಂಬುವವರನ್ನು ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅವರ ವಿರುದ್ಧ ಲುಕ್ ಔಟ್ ನೋಟಿಸ್ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ. ಮೆನನ್ ಅವರನ್ನು ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಏಪ್ರಿಲ್ 15ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ, ಮೆನನ್ ಅವರು, ಕಾಕ್ಸ್ ಅಂಡ್ ಕಿಂಗ್ಸ್ ಕಂಪನಿಯ ಮಾಲೀಕ ಅಜಯ್ ಪೀಟರ್ ಕೆರ್ಕರ್ ಅವರ ಆಪ್ತ. ಯೆಸ್‌ ಬ್ಯಾಂಕ್‌ನಿಂದ ₹400 ಕೋಟಿ ಸಾಲ ಪಡೆದು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣದ ವಿಚಾರಣೆ ಕೈಗೊಂಡಿದ್ದ ಮುಂಬೈ ಪೊಿೀಲಸರಿಗೆ ಮೆನನ್ ಪಾತ್ರದ ಬಗ್ಗೆ ಸುಳಿವು ಸಿಕ್ಕಿತ್ತು. ಸಾಲದ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಉದ್ದೇಶಕ್ಕೆ ಅವರು ಪಡೆದ ಸಾಲದ ಹಣ ಬಳಸಿಲ್ಲ ಎಂದೂ ಅಧಿಕಾರಿ ಹೇಳಿದ್ದಾರೆ. ಯೂರೋಪ್‌ನಲ್ಲಿ ಕಂಪನಿ ವ್ಯವಹಾರ ನೋಡಿಕೊಳ್ಳುತ್ತಿದ್ದ ಮೆನನ್, ಸಾಲದ ಮೊತ್ತದಲ್ಲಿ ₹56 ಕೋಟಿಯನ್ನು ಬ್ರಿಟನ್ ಮೂಲದ ಕಂಪನಿಗೆ ವರ್ಗಾವಣೆ ಮಾಡಿದ್ದ ಎಂದೂ ಅಧಿಕಾರಿ ಹೇಳಿದ್ದಾರೆ. 2021ರಲ್ಲಿ ಕಾಕ್ಸ್ ಅಂಡ್ ಕಿಂಗ್ಸ್‌ನ ಸೋದರ ಸಂಸ್ಥೆ ಕಾಕ್ಸ್ ಅಂಡ್ ಕಿಂಗ್ಸ್ ಫೈನಾನ್ಷಿಯಲ್ ಸರ್ವಿಸ್ ಲಿಮಿಟೇಡ್ ವಿರುದ್ಧ ಮುಂಬೈ ಪೊಲೀಸರ ಅಪರಾಧ ವಿಭಾಗವುು ಪ್ರಕರಣ ದಾಖಲಿಸಿತ್ತು. ಕಾಕ್ಸ್ ಅಂಡ್ ಕಿಂಗ್ಸ್ ಫೈನಾನ್ಷಿಯಲ್ ಸರ್ವಿಸ್ ಕಂಪನಿಯು ವಿದೇಶಿ ವಿನಿಮಯ, ಹಾಲಿಡೇ ಫೈನಾನ್ಸಿಂಗ್, ಶೈಕ್ಷಣಿಕ ಸಾಲ ಮುಂತಾದ ಸೇವೆಗಳನ್ನು ಒದಗಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.