ಬಿಜೆಪಿ 24 ಕ್ಯಾರೆಟ್ ಚಿನ್ನ, ಕಾಂಗ್ರೆಸ್‌ ತುಕ್ಕು ಹಿಡಿದ ಕಬ್ಬಿಣ- ರಾಜನಾಥ್ ರೇವಾ: ತ್ರಿವಳಿ ತಲಾಖ್ ನಿಷೇಧವನ್ನು ಉಲ್ಲೇಖಿಸಿ, ಬಿಜೆಪಿಯು ಹಿಂದೂ ಮತ್ತು ಮುಸ್ಲಿಮರ ನಡುವೆ ತಾರತಮ್ಯ ಮಾಡುವುದಿಲ್ಲ ಹಾಗೂ ಮಹಿಳೆಯರಿಗೆ ಗೌರವ ನೀಡುವುದು ನಮಗೆ ಅತ್ಯಂತ ಮಹತ್ವದ್ದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಡೆದ ಚುನಾವಣೆ ಸಮಾವೇಶದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ‘ಒಂದು ದೇಶ, ಒಂದು ಚುನಾವಣೆ ಪ್ರಕ್ರಿಯೆಯನ್ನು ಪ್ರತಿಪಾದಿಸಿದ ಅವರು ‘ಬಿಜೆಪಿ 24 ಕ್ಯಾರೆಟ್ ಚಿನ್ನ ಹಾಗೂ ಕಾಂಗ್ರೆಸ್‌ ತುಕ್ಕು ಹಿಡಿದ ಕಬ್ಬಿಣ' ಎಂದು ಮೊದಲಿಸಿದರು. ಬಿಜೆಪಿ ಯಾವಾಗಲೂ ಹಿಂದೂ ಮತ್ತು ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ ಎಂದು ಜನರು ಹೇಳುತ್ತಾರೆ. ಆದರೆ ನಾವು ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೂದಿಗಳ ನಡುವೆ ತಾರತಮ್ಯ ಮಾಡುವುದಿಲ್ಲ ಎಂದರು. ತಮ್ಮ ಪಕ್ಷವು ಎಲ್ಲರನ್ನೂ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತದೆ ಎಂದು ಪ್ರತಿಪಾದಿಸಿದರು. ಭಾರತದಲ್ಲಿ ಜನಿಸಿದ ಎಲ್ಲರೂ ಭಾರತ ಮಾತೆಯ ಮಕ್ಕಳು ಎಂದು ನಾವು ನಂಬುತ್ತೇವೆ. ಇದರಲ್ಲಿ ನಾವು ತಾರತಮ್ಯ ಮಾಡುವುದಿಲ್ಲ ಎಂದು ಸಿಂಗ್ ಹೇಳಿದರು. ಮಧ್ಯಪ್ರದೇಶದ 29 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19ರಿಂದ ಮೇ 13ರ ನಡುವೆ ನಾಲ್ಕು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.