ಪಡಿತರ ಹಗರ‌ಣ: ₹150 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ ನವದೆಹಲಿ: ಪಡಿತರ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮಾಜಿ ಆಹಾರ ಸಚಿವ ಜ್ಯೋತಿ ಪ್ರಿಯ ಮಲ್ಲಿಕ್‌ ಮತ್ತು ಇತರ ಇಬ್ಬರಿಗೆ ಸಂಬಂಧಿಸಿದ ₹150 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಜಪ್ತಿ ಮಾಡಿದೆ. ಬಕೀಬುರ್‌ ರಹಮಾನ್‌ ಮತ್ತು ಟಿಎಂಸಿ ನಾಯಕ ಶಂಕರ್‌ ಆಧ್ಯಾ ಇತರ ಇಬ್ಬರು ಆರೋಪಿಗಳು. ಮೂವರನ್ನು ತನಿಖಾ ಸಂಸ್ಥೆ ಬಂಧಿಸಿದೆ. ಮಲ್ಲಿಕ್‌ ಅವರ ನಿವಾಸ, ಆಪ್ತರ ಹೆಸರಿನಲ್ಲಿದ್ದ ಹಲವು ಬೇನಾಮಿ ಆಸ್ತಿ, ಕೋಲ್ಕತ್ತ ಮತ್ತು ಬೆಂಗಳೂರಿನಲ್ಲಿರುವ ರಹಮಾನ್‌ ಅವರ ಎರಡು ಹೋಟೆಲ್‌ಗಳು, ಹಲವು ಬ್ಯಾಂಕ್‌ ಖಾತೆಗಳಲ್ಲಿದ್ದ ಹಣ, ನಿಶ್ಚಿತ ಠೇವಣಿ ಸೇರಿದಂತೆ 48 ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿದೆ. ಮಲ್ಲಿಕ್‌ ಅವರು ತಮ್ಮ ಕುಟಂಬಸ್ಥರು ಮತ್ತು ಆಪ್ತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸ್ಥಿರಾಸ್ತಿಗಳನ್ನು ಉಡುಗೊರೆಯಾಗಿ ಪಡೆದಿದ್ದರು ಎಂದು ಇ.ಡಿ ಆರೋಪಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.