ಮಣಿಪುರ: 34 ಬಂಡುಕೋರರ ಶರಣಾಗತಿ ಗುವಾಹಟಿ: ‘ಯುನೈಟೆಡ್‌ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌’ (ಯುಎನ್‌ಎಲ್‌ಎಫ್‌) ಸಂಘಟನೆಯ ಪಾಂಬೆಯಿ ಬಣದ 34 ಸದಸ್ಯರು ಶುಕ್ರವಾರ ಅಸ್ಸಾಂ ರೈಫಲ್ಸ್‌ ಮುಂದೆ ಶರಣಾಗಿದ್ದಾರೆ. ಬಂಡುಕೋರರು ಮ್ಯಾನ್ಮಾರ್‌ನಿಂದ ಮಣಿಪುರಕ್ಕೆ ನುಸುಳಲು ಯತ್ನಿಸುತ್ತಿದ್ದ ವೇಳೆ ತೆಂಗನೌಪಲ್ ಜಿಲ್ಲೆಯ ಬಳಿ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದರು. ತೀವ್ರವಾದ ಗುಂಡಿನ ಚಕಮಕಿ ನಡೆದ ಬಳಿಕ ಬಂಡುಕೋರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ. ‘ಮ್ಯಾನ್ಮಾರ್‌ನ ಮತ್ತೊಂದು ಸಂಘಟನೆ ಪೀಪಲ್ಸ್‌ ಡಿಫೆನ್ಸ್‌ ಪೋರ್ಸ್‌ (ಪಿಡಿಎಫ್‌) ಮತ್ತು ಯುಎನ್‌ಎಲ್‌ಎಫ್‌ ಸಂಘಟನೆ ನಡುವೆ ಕೆಲ ದಿನಗಳಿಂದ ಕದನ ನಡೆಯುತ್ತಿದೆ. ಈ ಕಾರಣಕ್ಕೆ ಸುರಕ್ಷತೆಯ ಉದ್ದೇಶದಿಂದ ಬಂಡುಕೋರರು ಮಣಿಪುರಕ್ಕೆ ನುಸುಳಲು ಯತ್ನಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಪಾಂಬೆಯಿ ಬಣವು ಕಳೆದ ವರ್ಷ ನವೆಂಬರ್‌ನಲ್ಲಿ ಕೇಂದ್ರ ಮತ್ತು ಮಣಿಪುರ ರಾಜ್ಯ ಸರ್ಕಾರದೊಂದಿಗೆ ಕದನ ವಿರಾಮಕ್ಕೆ ಸಹಿ ಮಾಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.