ಪ್ರಜಾವಾಣಿ ‘ಯುವ ಸಾಧಕ’ ಶಾಂತಪ್ಪ ಕುರುಬರಗೆ ಯುಪಿಎಸ್‌ಸಿಯಲ್ಲಿ 644ನೇ ರ್‍ಯಾಂಕ್‌ ಕುರುಗೋಡು (ಬಳ್ಳಾರಿ): ಪ್ರಜಾವಾಣಿಯ ‘ಯುವ ಸಾಧಕ’ ಪ್ರಶಸ್ತಿಗೆ ಪಾತ್ರರಾಗಿದ್ದ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಹೊಸ ಗೆಣಿಕೆಹಾಳು ಗ್ರಾಮದ ಯುವಕ ಶಾಂತಪ್ಪ ಕುರುಬರ ಅವರು 2023ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಸಿಎಸ್‍ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶಕ್ಕೆ 644ನೇ ರ್‍ಯಾಂಕ್‌ ಪಡೆದಿದ್ದಾರೆ. ಶಾಂತಪ್ಪ ಅವರು 2016ರಲ್ಲಿ ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿದ್ದರು. ಉದ್ಯೋಗದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೂ ಅವರು ತಯಾರಿ ನಡೆಸಿದ್ದರು. ತಮ್ಮ 8ನೇ ಪ್ರಯತ್ನದಲ್ಲಿ ಯುಪಿಎಸ್‌ಸಿಯಲ್ಲಿ ಯಶಸ್ವಿಯಾಗಿರುವ ಶಾಂತಪ್ಪ, ಮೊದಲ ಐದು ಪ್ರಯತ್ನಗಳಲ್ಲಿ ಸಂದರ್ಶನಕ್ಕೆ ಆಯ್ಕೆಯಾಗಿರಲಿಲ್ಲ. 6 ಮತ್ತು 7ನೇ ಪ್ರಯತ್ನದಲ್ಲಿ ಮುಖ್ಯಪರೀಕ್ಷೆ ಮತ್ತು ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು. ಆದರೆ ಆಯ್ಕೆಯಾಗಿರಲಿಲ್ಲ. 8ನೇ ಪ್ರಯತ್ನದಲ್ಲಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಂದರ್ಶನಕ್ಕೆ ಆಯ್ಕೆಯಾಗಿದ್ದರು. ಶಾಂತಪ್ಪ ಅವರು ಕುರುಗೋಡಿನ ಗೆಣಿಕೆಹಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಪಡೆದಿದ್ದರು. ಬಳ್ಳಾರಿ ಸರ್ಕಾರಿ ಮುನ್ಸಿಪಲ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಮತ್ತು ಬಳ್ಳಾರಿ ವೀರಶೈವ ಕಾಲೇಜಿನಲ್ಲಿ ಬಿಎಸ್ಸಿ ಶಿಕ್ಷಣ ಪಡೆದಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಮೊದಲ ಪ್ರಯತ್ನ ಮತ್ತು ಪಿಯುಸಿ ಎರಡನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದರು. ಬಿಎಸ್ಸಿಯಲ್ಲಿ ಶೇ 78ರಷ್ಟು ಅಂಕಪಡೆದಿದ್ದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಅವರಿಗೆ ಸ್ಪೂರ್ತಿಯಾಗಿತ್ತು. ‘ಪ್ರಜಾವಾಣಿ‘ ವತಿಯಿಂದ 2019ರಲ್ಲಿ ನೀಡಿದ್ದ ‘ಯುವ ಸಾಧಕ’ ಪ್ರಶಸ್ತಿ ಮತ್ತು ಡೆಕ್ಕನ್‍ ಹೆರಾಲ್ಡ್ ವತಿಯಿಂದ 2022ರಲ್ಲಿ ನೀಡಿದ್ದ ‘ಚೇಂಜ್‍ಮೇಕರ್’ ಪ್ರಶಸ್ತಿಗೆ ಶಾಂತಪ್ಪ ಪಾತ್ರರಾಗಿದ್ದರು. 2019-20ರ ಕೋವಿಡ್‌ ಸಮಯದಲ್ಲಿ ಕರ್ತವ್ಯದ ಮಧ್ಯೆಯೂ ಕೊಳಗೇರಿ ನಿವಾಸಿಗಳ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಅವರ ಈ ಕಾರ್ಯ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.