ಸಂವಿಧಾನ ವಿರೋಧಿಗಳನ್ನು ಶಿಕ್ಷಿಸಿ: ಪ್ರಧಾನಿ ನರೇಂದ್ರ ಮೋದಿ ಗಯಾ/ಪೂರ್ಣಿಯಾ: ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ‘ಇಂಡಿಯಾ’ ಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತ ಸಂವಿಧಾನದ ವಿರುದ್ಧ ಇರುವವರನ್ನು ಮತ್ತು ದೇಶವನ್ನು ‘ವಿಕಸಿತ ಭಾರತ’ ಮಾಡುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ವಿರೋಧಿಸುವವರನ್ನು ಚುನಾವಣೆ ಮೂಲಕ ಶಿಕ್ಷಿಸಲು ಕರೆ ನೀಡಿದರು. ಆರ್‌ಜೆಡಿ ಮತ್ತು ಇತರ ಪಕ್ಷಗಳು ಸಂವಿಧಾನದೊಂದಿಗೆ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು. ಬಿಹಾರದ ಗಯಾ ಜಿಲ್ಲೆಯ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂವಿಧಾನದ ಹೆಸರಿನಲ್ಲಿ ಸುಳ್ಳುಗಳ ಮೊರೆ ಹೋಗಿದ್ದು, ನನ್ನನ್ನು ನಿಂದಿಸುತ್ತಿವೆ. ಎನ್‌ಡಿಎ ಮೈತ್ರಿಕೂಟವು ಸಂವಿಧಾನವನ್ನು ಗೌರವಿಸುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಬಂದರೂ ಅದನ್ನು ಬದಲಿಸಲು ಸಾಧ್ಯವಿಲ್ಲ. ಅಂಬೇಡ್ಕರ್‌ ಮತ್ತು ರಾಜೇಂದ್ರ ಪ್ರಸಾದ್ ಅವರು ನೀಡಿರುವ ಸಂವಿಧಾನವು ಬಡ ಕುಟುಂಬದಿಂದ ಬಂದ ನನ್ನನ್ನು ಪ್ರಧಾನಿ ಹುದ್ದೆಗೇರಿಸಿದೆ’ ಎಂದು ಹೇಳಿದರು. ಮೋದಿ ಅವರು ನೇಪಾಳ ಮತ್ತು ಬಾಂಗ್ಲಾದೊಂದಿಗೆ ಗಡಿ ಹಂಚಿಕೊಂಡಿರುವ ಪೂರ್ಣಿಯಾ ಜಿಲ್ಲೆಯಲ್ಲಿ ನಡೆದ ರ್‍ಯಾಲಿಯಲ್ಲೂ ಭಾಗವಹಿಸಿದರು. ಪೂರ್ಣಿಯಾದಲ್ಲಿ ಮೋದಿ ಕಾರ್ಯಕ್ರಮಕ್ಕೆ ಎನ್‌ಡಿಎ ಮಿತ್ರಪಕ್ಷವಾದ ಜೆಡಿಯು ನಾಯಕ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರಾಗಿದ್ದರು. ‘ಬಿಜೆಪಿಯು ಸಂವಿಧಾನವನ್ನು ಬದಲಾಯಿಸಲು ಹೊರಟಿದೆ’ ಎಂದು ಬಿಹಾರದಲ್ಲಿ ಮುಖ್ಯ ವಿರೋಧ ಪಕ್ಷವಾದ ಆರ್‌ಜೆಡಿಯ ನಾಯಕ ಲಾಲು ಪ್ರಸಾದ್ ಆರೋಪಿಸಿದ ಮಾರನೆಯ ದಿನ, ಮೋದಿ ಅವರು ಸಂವಿಧಾನದ ಬಗ್ಗೆ ಮಾತನಾಡಿದರು ಮತ್ತು ಆರ್‌ಜೆಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿ ಹೇಳಿದ್ದು... * ಭಾರತವನ್ನು ‘ಸಮೃದ್ಧ ಭಾರತ’ ಮಾಡುವ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿತು. * ಕಳೆದ 10 ವರ್ಷಗಳಲ್ಲಿ ಮಹಿಳೆಯರ ಕ್ರಾಂತಿಕಾರಕ ಮತ್ತು ಸಮಗ್ರ ಅಭಿವೃದ್ಧಿ ಆಗಿದ್ದು, 10 ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳನ್ನು ಸೇರಿದ್ದಾರೆ. ಅದರ ಪೈಕಿ ಬಿಹಾರದ ಮಹಿಳೆಯರ ಸಂಖ್ಯೆ 1.25 ಕೋಟಿ. * ವಿಕಾಸ ಮತ್ತು ವಿರಾಸತ್ (ಪರಂಪರೆ) ಎನ್‌ಡಿಎ ಕಾರ್ಯಸೂಚಿಯಾಗಿದ್ದು, ಭಾರತದ ಪರಂಪರೆಯನ್ನು ನಾವು ಜಾಗತಿಕ ಮಟ್ಟಕ್ಕೆ ಒಯ್ಯುತ್ತೇವೆ. ಅದರಿಂದ ಗಯಾಗೆ ಅನುಕೂಲವಾಗಲಿದೆ. * ವಿರೋಧ ಪಕ್ಷಗಳ ನಾಯಕರು ಸನಾತನ ಧರ್ಮವನ್ನು ಡೆಂಗಿ, ಮಲೇರಿಯಾ ಎಂದಿದ್ದಾರೆ. ಅವರು ಒಂದು ಸ್ಥಾನ ಗಳಿಸಲೂ ಯೋಗ್ಯರಲ್ಲ. ಅವರಿಗೆ ಶಿಕ್ಷೆ ಆಗಬೇಕು. * ಬಡತನದಿಂದ ಬಂದಿರುವ ನಾನು ಬಡವರಿಗೆ, ಹಿಂದುಳಿದವರಿಗೆ, ದಲಿತರಿಗೆ ಋಣಿಯಾಗಿದ್ದೇನೆ. * ಆರ್‌ಜೆಡಿ ಭ್ರಷ್ಟಾಚಾರ ಮತ್ತು ಗೂಂಡಾ ರಾಜ್‌ನ ಪ್ರತೀಕವಾಗಿದೆ. ಲಾಟೀನಿನಿಂದ (ಆರ್‌ಜೆಡಿ ಚಿಹ್ನೆ) ಮೊಬೈಲ್ ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಸಾಧ್ಯವೇ? * ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ವೋಟ್ ಬ್ಯಾಂಕ್ ರಾಜಕಾರಣದ ಫಲವಾಗಿರುವ ಅಕ್ರಮ ವಲಸೆಯನ್ನು ಮಟ್ಟ ಹಾಕುತ್ತೇವೆ. ‘ಭ್ರಷ್ಟಾಚಾರ ಅಪರಾಧ ಪೂರ್ಣಕಾಲಿಕ ಉದ್ಯೋಗ’ ರಾಜ್‌ಗಂಜ್: ಟಿಎಂಸಿ ಆಡಳಿತದಲ್ಲಿ ಭ್ರಷ್ಟಾಚಾರ ಮತ್ತು ಅಪರಾಧ ಪೂರ್ಣಕಾಲಿಕ ಉದ್ಯೋಗವಾಗಿವೆ ಎಂದು ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಪಕ್ಷವು ರೋಹಿಂಗ್ಯಾ ಮತ್ತು ಇತರ ಒಳನುಸುಳುಕೋರರಿಗೆ ರಾಜ್ಯದ ಜನಸಂಖ್ಯೆಯನ್ನು ಏರುಪೇರು ಮಾಡಲು ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದರು. ಇನ್ನೊಂದು ಕಡೆ ನಿರಾಶ್ರಿತತರಿಗೆ ಪೌರತ್ವ ನೀಡುವ ಸಿಎಎ ಅನ್ನು ಪಕ್ಷವು ವಿರೋಧಿಸುತ್ತಿದೆ ಎಂದು ಟೀಕಿಸಿದರು. ರಾಜ್‌ಗಂಜ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ‘ಟಿಎಂಸಿ ಸರ್ಕಾರವು ರಾಮ ನವಮಿ ರ್‍ಯಾಲಿಗಳಿಗೆ ಅನುಮತಿ ನೀಡುವುದಿಲ್ಲ. ಆದರೆ ರಾಮ ನವಮಿ ರ್‍ಯಾಲಿ ಮೇಲೆ ಕಲ್ಲು ತೂರುವವರಿಗೆ ಅನುಮತಿ ನೀಡುತ್ತದೆ’ ಎಂದು ಟೀಕಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.