ಲೋಕಸಭೆ ಚುನಾವಣೆ: ಮತದಾನ ತಪ್ಪಿಸದಂತೆ ಚಂದ್ರಚೂಡ್ ಮನವಿ ನವದೆಹಲಿ: ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ಮನವಿ ಮಾಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ‘ಅದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಆದ್ಯ ಕರ್ತವ್ಯ’ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆಯ ‘ನನ್ನ ಮತ ನನ್ನ ಧ್ವನಿ’ ಕಾರ್ಯಕ್ರಮದ ಭಾಗವಾಗಿ ವಿಡಿಯೊ ಸಂದೇಶ ಕಳಿಸಿರುವ ಅವರು, ನಾವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಾಗಿದ್ದೇವೆ ಎಂದಿದ್ದಾರೆ. ‘ಸಂವಿಧಾನವು ನಮಗೆ ಅನೇಕ ಹಕ್ಕುಗಳನ್ನು ನೀಡಿದೆ. ಅದೇ ರೀತಿ ಪ್ರತಿಯೊಬ್ಬರೂ ತಮಗೆ ವಹಿಸಿದ ಕರ್ತವ್ಯ ನಿಭಾಯಿಸಬೇಕೆಂದು ಬಯಸುತ್ತದೆ. ಅದರ ಪೈಕಿ ಮುಖ್ಯವಾದದ್ದು ಮತದಾನ ಮಾಡುವುದು’ ಎಂದು ತಿಳಿಸಿದರು. ‘ಮತದಾನ ಮಾಡುವಂತೆ ನಾನು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ. ನಮ್ಮ ಶ್ರೇಷ್ಠ ತಾಯ್ನೆಲದ ಪ್ರಜೆಗಳಾಗಿ ಮತ ಹಾಕುವ ಅವಕಾಶವನ್ನು ಕಳೆದುಕೊಳ್ಳಬೇಡಿ. ನಮ್ಮ ದೇಶಕ್ಕಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಐದು ನಿಮಿಷ.. ಅದು ಸಾಧ್ಯ. ಹೌದೋ ಅಲ್ಲವೋ? ಹೆಮ್ಮೆಯಿಂದ ಮತ ಚಲಾಯಿಸೋಣ. ನನ್ನ ಮತ, ನನ್ನ ಧ್ವನಿ’ ಎಂದು ಸಿಜೆಐ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.