ಇನ್ಸುಲಿನ್ ನೀಡದೆ ಪತಿಯನ್ನು ಜೈಲಿನಲ್ಲೇ ಕೊಲ್ಲಲು ಯತ್ನ: ಸುನಿತಾ ಕೇಜ್ರಿವಾಲ್‌ ರಾಂಚಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕೊಲ್ಲುವ ಉದ್ದೇಶದಿಂದ ಅವರಿಗೆ ಜೈಲಿನಲ್ಲಿ ಇನ್ಸುಲಿನ್ ನೀಡಲು ನಿರಾಕರಿಸಲಾಗುತ್ತಿದೆ ಎಂದು ಅವರ ಪತ್ನಿ ಸುನಿತಾ ಕೇಜ್ರಿವಾಲ್ ಆರೋಪಿಸಿದರು. ಇಲ್ಲಿ ನಡೆದ ಇಂಡಿಯಾ ಒಕ್ಕೂಟದ ನ್ಯಾಯ್ ಚುನಾವಣಾ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಅವರು ನನ್ನ ಪ‍ತಿ ಅರವಿಂದ ಕೇಜ್ರಿವಾಲ್‌ರನ್ನು ಕೊಲ್ಲಬೇಕೆಂದಿದ್ದಾರೆ. ಅವರ ಆಹಾರ ತಯಾರಿಯನ್ನು ಕೂಡ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗುತ್ತಿದೆ. ಇನ್ಸುಲಿನ್‌ ನಿರಾಕರಿಸಲಾಗುತ್ತಿದೆ. ನನ್ನ ಪತಿ ಮಧುಮೇಹ ಪೀಡಿತರಾಗಿದ್ದು, 12 ವರ್ಷಗಳಿಂದ ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದಾರೆ. ಅವರಿಗೆ ನಿತ್ಯ 50 ಯೂನಿಟ್‌ ಇನ್ಸುಲಿನ್‌ ಬೇಕಾಗಿದೆ’ ಎಂದರು. ಜನರ ಪರವಾಗಿ ಸೇವೆ ಮಾಡಿದ್ದಕ್ಕಾಗಿ ನನ್ನ ಪತಿಯನ್ನು ಜೈಲಿಗೆ ಹಾಕಲಾಗಿದೆ. ಅವರ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಹೇಳಿದರು. ಬಿಜೆಪಿಯ ಏಕಾಧಿ‍ಪತ್ಯದ ವಿರುದ್ಧ ಹೋರಾಡಿ ನಾವು ಗೆಲುವು ಸಾಧಿಸಲಿದ್ದೇವೆ. ಅರವಿಂದ ಕೇಜ್ರಿವಾಲ್ ಹಾಗೂ ಹೇಮಂತ್ ಸೊರೇನ್‌ ಜೈಲಿನಿಂದ ಹೊರಬರಲಿದ್ದಾರೆ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.