ಮದುವೆ ಮುಗಿಸಿ ಮರಳುತ್ತಿದ್ದಾಗ ಅಪಘಾತ: 9 ಜನರ ಸಾವು ಕೋಟಾ: ಮದುವೆ ಮುಗಿಸಿಕೊಂಡು ಮರಳುತ್ತಿದ್ದ 9 ಜನರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಝಾಲಾವಾಢದಲ್ಲಿ ನಡೆದಿದೆ. 16ರಿಂದ 30 ವರ್ಷ ವಯಸ್ಸಿನ 9 ಜನ ‌ಪುರುಷರು ಮಧ್ಯಪ್ರದೇಶದ ಡೂಂಗರಿ ಗ್ರಾಮದಲ್ಲಿ ಮದುವೆ ಮುಗಿಸಿಕೊಂಡು ಮರಳುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಟ್ರಕ್‌ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಮೃತರ ಪೈಕಿ ರೋಹಿತ್‌ (16), ಸೋನು (22) ಮತ್ತು ದೀಪಕ್‌ (24) ಸಹೋದರರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರಾದ ಅಶೋಕ್‌ (24), ಹೇಮರಾಜ್ (33) ರವಿಶಂಕರ್‌ (25) ಮತ್ತು ರಾಹುಲ್ (20) ಎಂಬುವವರು ಝಾಲಾವಾಢದ ಅಕಲೇರಾ ಗ್ರಾಮದ ನಿವಾಸಿಗಳು. ಉಳಿದಂತೆ ಮೃತ ರೋಹಿತ್‌ (22) ಮತ್ತು ರಾಮ್‌ಕಿಶನ್‌ (20) ಕ್ರಮವಾಗಿ ಝಾಲಾವಾಢದ ಖಾನ್‌ಪುರ ಹಾಗೂ ಬಾರಾ ಜಿಲ್ಲೆಯ ಹರನಾವಡಾ ನಿವಾಸಿಗಳು. ಇನ್ನು ಅಪಘಾತದಲ್ಲಿ ‌ಗಂಭೀರವಾಗಿ ಗಾಯಗೊಂಡಿರುವ 18 ವರ್ಷದ ಮನೀಶ್‌ ಬಗಾರಿ ಎಂಬುವವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಕ್‌ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.