ಅದಾನಿ ಗ್ರೂಪ್‌ ವಿರುದ್ಧ ಪ್ರತಿಭಟನೆ: ಚರ್ಚ್‌ನ ಬ್ಯಾಂಕ್‌ ಖಾತೆ ಸ್ಥಗಿತ ತಿರುವನಂತಪುರ: ಅದಾನಿ ಸಮೂಹದ ಮಾಲೀಕತ್ವದ ಬಂದರು ವಿರುದ್ಧದ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಚರ್ಚ್‌ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ ಎಂದು ಇಲ್ಲಿನ ಪ್ರಮುಖ ಲ್ಯಾಟಿನ್‌ ಚರ್ಚ್‌ ತಿಳಿಸಿದೆ. ಕೇರಳದಲ್ಲಿ ಇದೇ 26ರಂದು ಲೋಕಸಭೆಗೆ ಚುನಾವಣೆ ನಡೆಯಲಿದೆ. ಅದಕ್ಕೆ ಮುನ್ನ ಈ ಹೇಳಿಕೆ ನೀಡಿರುವ ಚರ್ಚ್‌, ಖಾತೆ ಸ್ಥಗಿತಗೊಳಿಸಿದ್ದರ ಪರಿಣಾಮವನ್ನು ಚರ್ಚ್‌ ಈಗಲೂ ಎದುರಿಸುತ್ತಿದೆ ಎಂದು ತಿಳಿಸಿದೆ. ಅದಾನಿ ಸಮೂಹದ ಮಾಲೀಕತ್ವವುಳ್ಳ ಇಲ್ಲಿನ ವಿಳಿಂಜಂ ಅಂತರರಾಷ್ಟ್ರೀಯ ಬಂದರು ವಿರುದ್ಧ 2022ರ ನವೆಂಬರ್‌ನಲ್ಲಿ ಪ್ರತಿಭಟನೆ ನಡೆದಿದ್ದು, ಹಿಂಸಾಚಾರಕ್ಕೂ ಕಾರಣವಾಗಿತ್ತು. ಭಾನುವಾರ ಚರ್ಚ್‌ನಲ್ಲಿ ನಡೆದ ಪ್ರಾರ್ಥನೆ ವೇಳೆ ಓದಲಾದ ಪತ್ರದಲ್ಲಿ ಚರ್ಚ್‌ ಈ ಮಾಹಿತಿ ಹಂಚಿಕೊಂಡಿದೆ. ಖಾತೆ ಸ್ಥಗಿತಗೊಳಿಸಿರುವ ಕಾರಣ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎಂದು ತಿಳಿಸಿದೆ. ವಿವಿಧ ಲ್ಯಾಟಿನ್‌ ಚರ್ಚ್‌ಗಳಲ್ಲೂ ಈ ಪತ್ರವನ್ನು ಓದಲಾಗಿದ್ದು, ಚರ್ಚ್‌ನ ವಿವಿಧ ವೆಚ್ಚಗಳನ್ನು ಭರಿಸಲು ಆರ್ಥಿಕ ನೆರವು ನೀಡಬೇಕು ಎಂದು ಕೋರಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.