ಘಜಿಯಾಪುರ: ಬೃಹತ್‌ ಪ್ರಮಾಣದ ತ್ಯಾಜ್ಯರಾಶಿಗೆ ಬೆಂಕಿ ನವದೆಹಲಿ: ಪೂರ್ವ ದೆಹಲಿಯ ಗಾಜೀಪುರದಲ್ಲಿರುವ ಬೃಹತ್‌ ಪ್ರಮಾಣದ ತ್ಯಾಜ್ಯದ ರಾಶಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಗೆ ಆವರಿಸಿಕೊಂಡಿದೆ. ದೆಹಲಿ ಅಗ್ನಿಶಾಮಕ ಇಲಾಖೆಯ ಪ್ರಕಾರ, ಬೃಹತ್‌ ಪ್ರಮಾಣದಲ್ಲಿದ್ದ ತ್ಯಾಜ್ಯದಲ್ಲಿ ಉತ್ಪತ್ತಿಯಾದ ಅನಿಲಗಳಿಂದಾಗಿ ಭಾನುವಾರ ಸಂಜೆ ಬೆಂಕಿ ಅವಘಡ ಸಂಭವಿಸಿದೆ. ‘ಇತರರ ಜೀವ ಮತ್ತು ಸುರಕ್ಷತೆಗೆ ಹಾನಿ ಉಂಟುಮಾಡಿದ ಮತ್ತು ವಾತಾವರಣವನ್ನು ಕಲುಷಿತಗೊಳಿಸಿದ ಆರೋಪಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ಬೆಂಕಿ ಹೊತ್ತಿಕೊಂಡು 15 ಗಂಟೆಗಳು ಕಳೆದಿವೆ. ಇದರಿಂದ ಉಂಟಾಗಿರುವ ಹೊಗೆಯು ಅತಿ ವಿಷಕಾರಿಯಾಗಿದ್ದು, ನಮಗೆ ಕಣ್ಣು ತೆರಯಲು ಕೂಡ ಸಾಧ್ಯವಾಗುತ್ತಿಲ್ಲ. ಕಷ್ಟಪಟ್ಟು ಉಸಿರಾಡುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ರಾಮ್‌ ಕುಮಾರ್‌ ಅವರು ತಿಳಿಸಿದ್ದಾರೆ. ‘ಹೊಗೆ ತಂಬಿಕೊಂಡಿರುವುದರಿಂದ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ‌ಸಾಧ್ಯವಾಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ‘ಘಟನೆಯ ಬಗ್ಗೆ ತಿಳಿದ ತಕ್ಷಣ, ಸ್ಥಳಕ್ಕೆ ಭೇಟಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇಡೀ ರಾತ್ರಿ ಅವರು ಸ್ಥಳದಲ್ಲೇ ಇದ್ದರು. ಪರಿಸ್ಥಿತಿ ಸುಧಾರಿಸಿದೆ. ಮುಂದಿನ 5 ಗಂಟೆಗಳಲ್ಲಿ ಹೊಗೆ ನಿಯಂತ್ರ‌ಣವಾಗಲಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ. ಬಿಜೆಪಿ ಕೇವಲ ಆರೋಪ ಮಾಡುತ್ತಿದೆ. ರಾಜಕೀಯ ಮಾಡುವ ಸಮಯ ಇದಲ್ಲ’ ಎಂದು ದೆಹಲಿ ಮೇಯರ್‌ ಶೆಲ್ಲಿ ಓಬೆರಾಯ್‌ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.