ಭೋಜಶಾಲಾ ಸಮೀಕ್ಷೆಗೆ ಸಮಯಾವಕಾಶ ಕೇಳಿದ ಎಎಸ್‌ಐ ಇಂದೋರ್(ಮಧ್ಯಪ್ರದೇಶ): ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ವಿವಾದಿತ ಭೋಜಶಾಲಾ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಸಮೀಕ್ಷೆ ಪೂರ್ಣಗೊಳಿಸಲು ಎಂಟು ವಾರಗಳು ಬೇಕು ಎಂದು ಹೇಳಿದೆ. ಈ ಕುರಿತು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠಕ್ಕೆ ಅರ್ಜಿ ಸಲ್ಲಿಸಿರುವ ಎಎಸ್‌ಐ, ವಿವಾದಿತ ಆವರಣದಲ್ಲಿರುವ ಸಂರಚನೆಗಳ ಕುರಿತು ತಿಳಿದುಕೊಳ್ಳು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಹೈಕೋರ್ಟ್‌ಗೆ ಮನವಿ ಮಾಡಿದೆ. ಭೋಜಶಾಲ ವಿವಾದ ಕುರಿತ ಅರ್ಜಿಯ ಮುಂದಿನ ವಿಚಾರಣೆಯನ್ನು ಹೈಕೋರ್ಟ್‌ ಏಪ್ರಿಲ್‌ 29ಕ್ಕೆ ನಿಗದಿಪಡಿಸಿತ್ತು. ಎಎಸ್‌ಐ ಸಲ್ಲಿಸಿರುವ ಹೊಸ ಅರ್ಜಿಯ ವಿಚಾರಣೆಯನ್ನೂ ಅದೇ ದಿನ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಿಂದೂ ಫ್ರಂಟ್‌ ಫಾರ್‌ ಜಸ್ಟೀಸ್‌ (ಎಚ್‌ಎಫ್‌ಜೆ) ಸಂಘಟನೆಯು ಭೋಜಶಾಲಾ–ಕಮಲ ಮೌಲಾ ಮಸೀದಿ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಅದರಂತೆ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ನಡೆಸಲು ಮಾರ್ಚ್‌ 11ರಂದು ಹೈಕೋರ್ಟ್‌ ಎಎಸ್‌ಐಗೆ ನಿರ್ದೇಶಿಸಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.