ತಪ್ಪು ಮಾಹಿತಿ ಪೋಸ್ಟ್‌: ಅಣ್ಣಾಮಲೈ ವಿರುದ್ಧ ಪ್ರಕರಣ ಚೆನ್ನೈ: ಡಿಎಂಕೆ ಕಾರ್ಯಕರ್ತರು ಕಡಲೂರು ಜಿಲ್ಲೆಯ ಪಕ್ಕಿರಿಮಣಿಯಂ ಎಂಬ ಗ್ರಾಮದ 45 ವರ್ಷದ ಮಹಿಳೆಯೊಬ್ಬರನ್ನು ಥಳಿಸಿ, ಹತ್ಯೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ‘ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ’ ಪೋಸ್ಟ್‌ ಮಾಡಿದ ಆರೋಪದಡಿ ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಡಲೂರು ಜಿಲ್ಲಾ ಪೊಲೀಸರು ಅಣ್ಣಾಮಲೈ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹಬ್ಬಿಸಿದ್ದಕ್ಕಾಗಿ ಮೂವರ ವಿರುದ್ಧ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ‘ಲೋಕಸಭೆ ಚುನಾವಣೆ ಅಂಗವಾಗಿ ಏಪ್ರಿಲ್‌ 19ರಂದು ನಡೆದಿದ್ದ ಮತದಾನದ ವೇಳೆ, ಆಡಳಿತಾರೂಢ ‍‍ಡಿಎಂಕೆ ವಿರುದ್ಧ ಗೋಮತಿ ಎಂಬುವವರು ಮತ ಚಲಾವಣೆ ಮಾಡಿದ್ದಕ್ಕೆ ಪಕ್ಷದ ಕಾರ್ಯಕರ್ತರು ಆಕೆಯನ್ನು ಥಳಿಸಿ, ಕೊಂದಿದ್ದರು. ಗೋಮತಿ ಅವರನ್ನು ಹತ್ಯೆ ಮಾಡಿರುವ ಡಿಎಂಕೆ ಕಾರ್ಯಕರ್ತರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿ ಅಣ್ಣಾಮಲೈ ಏಪ್ರಿಲ್‌ 21ರಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.