| ಕೇರಳದಲ್ಲಿ ಉ‌ಗ್ರವಾದಕ್ಕೆ ಕಾಂಗ್ರೆಸ್‌, ಎಡಪಕ್ಷಗಳ ಬೆಂಬಲ: ಅಮಿತ್ ಶಾ ಆಳಪ್ಪುಳ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಬೆಂಬಲ ಪಡೆದುಕೊಂಡು ಕೇರಳದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಉಗ್ರವಾದಕ್ಕೆ ರಕ್ಷಣೆ ನೀಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದರು. ಅವರು ಆಳಪ್ಪುಳದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಸಿಪಿಐಎಂ ಹಾಗೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಆಡಳಿತದ ವೇಳೆ ರಾಜ್ಯದಲ್ಲಿ ಉಗ್ರವಾದಕ್ಕೆ ರಕ್ಷಣೆ ನೀಡಲಾಗಿತ್ತು. ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಈ ಪಕ್ಷಗಳು ಪಿಎಫ್‌ಐಅನ್ನು ಬೆಂಬಲಿಸಿದ್ದವು ಎಂದರು. ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಪಿಎಫ್‌ಐನ ರಾಜಕೀಯ ವಿಭಾಗ ಎಸ್‌ಡಿಪಿಐ ಬಹಿರಂಗವಾಗಿ ಹೇಳಿದೆ. ಪಿಎಫ್‌ಐ ನಿಷೇಧದ ಬಗ್ಗೆ ಎಲ್‌ಡಿಎಫ್‌ ಮೌನವಾಗಿದೆ. ಜಮಾತೆ ಇಸ್ಲಾಮಿ ಹಿಂದ್‌ ಬೆಂಬಲಿತ ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾದ ಬೆಂಬಲವೂ ಕಾಂಗ್ರೆಸ್‌ಗೆ ಇದೆ. 2008ರ ಬೆಂಗಳೂರು ಬಾಂಬ್‌ ಬ್ಲಾಸ್ಟ್ ಆರೋಪಿ ಅಬ್ದುಲ್ ನಾಸರ್ ಮದನಿ ಅವರ ಪಿಡಿಪಿ ಪಕ್ಷದ ಬೆಂಬಲ ಎಲ್‌ಡಿಎಫ್‌ಗೆ ಇದೆ. ಇನ್ನೊಂದು ಬದಿಯಲ್ಲಿ ಪಿಎಫ್‌ಐನಂಥ ಸಂಘಟನೆಗಳಿಂದ ದೇಶವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಹೋರಾಡುತ್ತಿದ್ದಾರೆ ಎಂದು ಶಾ ಹೇಳಿದರು. 2021ರಲ್ಲಿ ಕೊಲೆಯಾದ ಬಿಜೆಪಿಯ ಒಬಿಸಿ ಮೋರ್ಚಾದ ನಾಯಕ ರಂಜಿತ್‌ ಶ್ರೀನಿವಾಸನ್‌ ಅವರ ಬಗ್ಗೆಯೂ ಪ್ರಸ್ತಾಪಿಸಿದ ಶಾ, ಅವರನ್ನು ಪಿಎಫ್‌ಐ ಕಾರ್ಯಕರ್ತರು ಕೊಲೆ ಮಾಡಿದ್ದಾರೆ ಎಂದು ಆರೋ‍ಪ ಮಾಡಿದರು. ಅಲ್ಲದೆ ನರೇಂದ್ರ ಮೋದಿ ಅಧಿಕಾರದಲ್ಲಿರುವವರೆಗೂ ಪಿಎಫ್‌ಐ ಮೇಲಿನ ನಿಷೇಧ ಜಾರಿಯಲ್ಲಿರಲಿದೆ ಎಂದರು. ಆಳಪ್ಪುಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಸುರೇಂದ್ರನ್‌ ಪರ ಅವರು ಪ್ರಚಾರ ನಡೆಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.