ವಯನಾಡ್ | ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಶಂಕಿತ ಮಾವೋವಾದಿಗಳು ವಯನಾಡ್: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ನಾಲ್ವರು ಸದಸ್ಯರ ಶಸ್ತ್ರಸಜ್ಜಿತ ಶಂಕಿತ ಮಾವೋವಾದಿಗಳ ಗುಂಪು, ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದೆ ಎಂದು ವರದಿಯಾಗಿದೆ. ತಳಪ್ಪುಳ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಕ್ಕೆ ಬಂದಿರುವ ಶಂಕಿತ ಮಾವೋವಾದಿಗಳು, ಸ್ಥಳೀಯರಲ್ಲಿ ಚುನಾವಣೆ ಬಹಿಷ್ಕರಿಸುವಂತೆ ಒತ್ತಾಯಿಸಿದ್ದಾರೆ. ಶಂಕಿತ ಮಾವೋವಾದಿಗಳ ಉಪಸ್ಥಿತಿ ಮಾಹಿತಿ ತಿಳಿದ ಕೂಡಲೇ ಕಂಬಮಲ ಪ್ರದೇಶಕ್ಕೆ ಪೊಲೀಸ್ ಸಿಬ್ಬಂದಿ ತೆರಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ಮುಂಜಾನೆ 6.15ರ ಸುಮಾರಿಗೆ ಪ್ರದೇಶಕ್ಕೆ ಬಂದ ಮಾವೋವಾದಿಗಳು ಚುನಾವಣೆ ಬಹಿಷ್ಕರಿಸುವಂತೆ ಘೋಷಣೆ ಕೂಗಿದರು. ಯೂನಿಫಾರ್ಮ್ ಧರಿಸಿ, ಬಂದೂಕುಗಳನ್ನು ಹಿಡಿದಿದ್ದ ಮಾವೋವಾದಿಗಳು ಸುಮಾರು 20 ನಿಮಿಷಗಳ ಕಾಲ ಇದ್ದರು ಎಂದು ತಿಳಿಸಿದ್ದಾರೆ. ಶಂಕಿತ ಮಾವೋವಾದಿಗಳು, ಸ್ಥಳೀಯರೊಂದಿಗೆ ಮಾತನಾಡುತ್ತಿರುವ ವಿಡಿಯೊ ನಂತರ ಬಯಲಾಗಿದೆ. ಕೇರಳದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸತತ ಎರಡನೇ ಬಾರಿಗೆ ಗೆಲ್ಲುವ ಗುರಿ ಹೊಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.