ಕಾರ್ಯನಿರ್ವಹಣೆ ಬಗ್ಗೆ ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್ ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಕೆಲವು ಅಂಶಗಳ ಕುರಿತು ಸುಪ್ರೀಂ ಕೋರ್ಟ್ ಬುಧವಾರ ಚುನಾವಣಾ ಆಯೋಗದಿಂದ ಸ್ಪಷ್ಟೀಕರಣ ಕೇಳಿದ್ದು, ಮಧ್ಯಾಹ್ನ 2 ಗಂಟೆಗೆ ಹಿರಿಯ ಅಧಿಕಾರಿಯೊಬ್ಬರು ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚಿಸಿದೆ. ಇವಿಎಂನಲ್ಲಿ ದಾಖಲಾಗುವ ಮತಗಳ ಕುರಿತಂತೆ ವಿವಿಪ್ಯಾಟ್ ಮೂಲಕ ಸಂಪೂರ್ಣ ಪುನರ್ ಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತಾದ ವಿಚಾರಣೆ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಕೆಲವು ಅಂಶಗಳ ಕುರಿತಂತೆ ಸ್ಪಷ್ಟನೆ ಬೇಕಿದೆ. ಚುನಾವಣಾ ಆಯೋಗ ನೀಡಿರುವ ಉತ್ತರದಲ್ಲಿ ಕೆಲ ಗೊಂದಲಗಳಿವೆ ಎಂದು ಹೇಳಿದೆ. ‘ನಾವು ತಪ್ಪು ಆದೇಶ ನೀಡಲು ಬಯಸುವುದಿಲ್ಲ. ನಮ್ಮ ಪರಿಶೀಲನೆ ವೇಳೆ ಗೊಂದಲಗಳು ಕಂಡು ಬಂದಿದ್ದು, ಸ್ಪಷ್ಟೀಕರಣವನ್ನು ಪಡೆಯಲು ಯೋಚಿಸಿದ್ದೇವೆ’ಎಂದು ಪೀಠವು ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿಗೆ ತಿಳಿಸಿದೆ. 2 ಗಂಟೆ ವೇಳೆಗೆ ಆಯೋಗದ ಉಪ ಚುನಾವಣಾ ಆಯುಕ್ತ ನಿತೇಶ್ ಕುಮಾರ್ ವ್ಯಾಸ್ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ. ಇವಿಎಂ ಕಾರ್ಯನಿರ್ವಹಣೆ ಕುರಿತಂತೆ ಈ ಹಿಂದೆ ವ್ಯಾಸ್, ಸುಪ್ರೀಂ ಕೋರ್ಟ್‌ಗೆ ವಿವರಣೆ ನೀಡಿದ್ದರು. ಇವಿಎಂನಲ್ಲಿ ಮತಗಳ ಸಂಗ್ರಹ, ಇವಿಎಂ ಕಂಟ್ರೋಲಿಂಗ್ ಯೂನಿಟ್‌ನ ಮೈಕ್ರೋಚಿಪ್ ಮತ್ತು ಇತರ ಅಂಶಗಳ ಕುರಿತಂತೆ ಚುನಾವಣಾ ಆಯೋಗದಿಂದ ನ್ಯಾಯಾಲಯ ಸ್ಪಷ್ಟನೆ ಕೇಳಲು ಬಯಸಿದೆ. ವಿವಿಪ್ಯಾಟ್ ಸ್ವತಂತ್ರ ಮತ ಪರಿಶೀಲನಾ ವ್ಯವಸ್ಥೆಯಾಗಿದ್ದು, ಮತದಾರರು ತಮ್ಮ ಮತಗಳನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಎಂದು ನೋಡಲು ಅನುವು ಮಾಡಿಕೊಡುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.