ಛತ್ತೀಸಗಢ: 18 ನಕ್ಸಲೀಯರು ಶರಣು ದಾಂತೇವಾಡ: ಛತ್ತೀಸಗಢದ ದಾಂತೇವಾಡದಲ್ಲಿ ಮೂವರು ಮಹಿಳೆಯರು ಸೇರಿದಂತೆ 18 ನಕ್ಸಲೀಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ. ಈ ಮೂಲಕ ಸಮಾಜದ ಮುಖ್ಯವಾಹಿನಿಯ ಭಾಗವಾಗಲು ನಿರ್ಧರಿಸಿದ್ದಾರೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರಾಯ್ ತಿಳಿಸಿದ್ದಾರೆ. ಹುರೇಪಾಲ್ ಪಂಚಾಯತ್ ಮಿಲಿಷಿಯಾ ಪ್ಲಾಟೂನ್ ವಿಭಾಗದ ಕಮಾಂಡರ್ ಆಗಿದ್ದ ಹಿಡ್ಮಾ ಒಯಾಮ್ (34), ಮೂವರು ಮಹಿಳಾ ನಕ್ಸಲೀಯರ ಪೈಕಿ ಉಪ ಕಮಾಂಡರ್ ಆಗಿದ್ದ ಸಂಬತಿ ಒಯಾಮ್ (23), ನಿಷೇಧಿತ ಸಿಪಿಐನ (ಮಾವೋವಾದಿ) ಕಾಕಡಿ ಪಂಚಾಯತ್ ಕ್ರಾಂತಿಕಾರಿ ಮಹಿಳಾ ಆದಿವಾಸಿ ಸಂಘಟನೆಯ ಉಪಾಧ್ಯಕ್ಷೆ ಗಂಗಿ ಮದ್ಕಮ್ (28) ಹಾಗೂ ಮಾವೋವಾದಿ ಸಂಘಟನೆಯ ಸದಸ್ಯೆ ಹುಂಗಿ ಒಯಾಮ್ (20) ಶರಣಾದ ಪ್ರಮುಖರು. ಪೊಲೀಸರು ಹಮ್ಮಿಕೊಂಡ ‘ಲೋನ್ ವರ್ರಾಟು’ ಎಂಬ ಪುನರ್ವಸತಿ ಆಂದೋಲನದ ಭಾಗವಾಗಿ 18 ನಕ್ಸಲೀಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಮುಖ್ಯವಾಹಿನಿಗೆ ಬರಲು ಮುಂದಾಗಿದ್ದಾರೆ. ನಕ್ಸಲರು ಬಂದ್‌ಗೆ ಕರೆಕೊಟ್ಟಾಗ ರಸ್ತೆಗಳನ್ನು ಅಗೆಯುವುದು, ರಸ್ತೆಗೆ ಅಡ್ಡಲಾಗಿ ಮರ ಬೀಳಿಸುವ ಕೆಲಸ ಮತ್ತು ಪೋಸ್ಟರ್‌ಗಳನ್ನು ಅಂಟಿಸುವ ಕೆಲಸ ವಹಿಸಲಾಗಿದೆ. ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಈ ಮೂಲಕ ದಂತೇವಾಡ ಜಿಲ್ಲೆಯಲ್ಲಿ 738 ನಕ್ಸಲೀಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಂತಾಗಿದೆ. ಈ ಪೈಕಿ 177 ಮಂದಿಯ ತಲೆಗೆ ಇನಾಮು ಘೋಷಿಸಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.