ಚೀನಾ– ಟಿಬೆಟ್‌ ದೇಶಾಂತರ ಸರ್ಕಾರದ ನಡುವೆ ಅನೌಪಚಾರಿಕ ಮಾತುಕತೆ ಧರ್ಮಶಾಲಾ: ಟಿಬೆಟ್‌ನಲ್ಲಿ ಚೀನಾ ವಿರೋಧಿ ಪ್ರತಿಭಟನೆ ಮತ್ತು ಬೌದ್ಧರ ನಾಡಿನ ಕಡೆಗೆ ಬೀಜಿಂಗ್‌ನ ಕಠಿಣ ಧೋರಣೆಯಿಂದಾಗಿ ಔಪಚಾರಿಕ ಮಾತುಕತೆಗಳು ಸ್ಥಗಿತಗೊಂಡಿದ್ದ ದಶಕದ ನಂತರ ಟಿಬೆಟ್‌ನ ದೇಶಾಂತರ ಸರ್ಕಾರ ಮತ್ತು ಚೀನಾ ನಡುವೆ ಮತ್ತೆ ಔಪಚಾರಿಕ ಮಾತುಕತೆಯನ್ನು ಪುನರಾರಂಭಿಸುವ ಇಚ್ಛೆ ಎರಡೂ ಕಡೆಗಳಿಂದಲೂ ವ್ಯಕ್ತವಾಗಿದೆ. ದಿ ಸಿಕಿಯೊಂಗ್‌ ಅಥವಾ ಟಿಬೆಟ್‌ನ ದೇಶಾಂತರ ಸರ್ಕಾರದ ರಾಜಕೀಯ ಮುಖ್ಯಸ್ಥ ಪೆನ್ಪಾ ಸೆರಿಂಗ್‌ ಅವರು ಅನೌಪಚಾರಿಕ ಮಾತುಕತೆಗಳು ನಡೆಯುತ್ತಿರುವುದನ್ನು ದೃಢಪಡಿಸಿದರು. ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಸಂಧಾನಕಾರರು ಮಾತುಕತೆಯಲ್ಲಿ ತೊಡಗಿದ್ದಾರೆ. ಆದರೆ, ಇದು ತಕ್ಷಣಕ್ಕೆ ಫಲಿತಾಂಶ ನೀಡುತ್ತದೆ ಎನ್ನುವ ನಿರೀಕ್ಷೆ ಇಲ್ಲ ಎಂದು ಹೇಳಿದ್ದಾರೆ. ‘ನಾವು ಕಳೆದ ವರ್ಷದಿಂದ ಅನೌಪಚಾರಿಕ ಮಾತುಕತೆಯಲ್ಲಿ ನಿರತವಾಗಿದ್ದೇವೆ. ಆದರೆ, ಇದರ ಮೇಲೆ ನಮಗೆ ಯಾವುದೇ ತಕ್ಷಣದ ನಿರೀಕ್ಷೆಗಳಿಲ್ಲ. ಈ ಪ್ರಯತ್ನ ದೀರ್ಘಾವಧಿಯಲ್ಲಿ ಫಲಿಸಬಹುದು. ಅನೌಪಚಾರಿಕ ಮಾತುಕತೆ ಇನ್ನಷ್ಟು ನಡೆಯಬೇಕಿದೆ’ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು. ‘ಬೀಜಿಂಗ್‌ನಲ್ಲಿ ಆ ದೇಶದ ನಾಯಕರೊಂದಿಗೆ ಮಾತುಕತೆ ನಡೆಸಲು ನಾನು ಸಂಧಾನಕಾರರನ್ನು ನೇಮಿಸಿದ್ದೇನೆ. ಬೇರೆಯವರೂ ಈ ನಿಟ್ಟಿನಲ್ಲೂ ಪ್ರಯತ್ನಿಸುತ್ತಿದ್ದಾರೆ’ ಎಂದು ಕೇಂದ್ರ ಟಿಬೆಟ್‌ ಆಡಳಿತದ (ಸಿಟಿಎ) ಮುಖ್ಯಸ್ಥ ಸೆರಿಂಗ್‌ ಹೇಳಿದ್ದಾರೆ. 2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಉದ್ಭವಿಸಿದ ವಿವಾದದ ನಂತರ ಭಾರತ ಮತ್ತು ಚೀನಾ ನಡುವೆ ಮೂಡಿರುವ ಬಿರುಕಿನ ಸಂಬಂಧ ಉಲ್ಲೇಖಿಸಿದ ಸಿಟಿಎ ನಾಯಕ, ಭಾರತದ ಗಡಿಯಲ್ಲಿ ಚೀನಾದ ಆಕ್ರಮಣವು ಟಿಬೆಟ್‌ ಸಮಸ್ಯೆಯನ್ನೂ ಎತ್ತಿ ತೋರಿಸಿದೆ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.