ಕಾಂಗ್ರೆಸ್‌ನ ರಾಜಕುಮಾರನಿಗೆ ಮಂಡಿ ಜನ ಪಾಠ ಕಲಿಸಲಿದ್ದಾರೆ: ಕಂಗನಾ ರನೌತ್‌ ಶಿಮ್ಲಾ: ರಾಜ್ಯದ ಮಹಿಳೆಯರಿಗೆ ಅಗೌರವ ತೋರಿದ, ಅನುಚಿತ ಹೇಳಿಕೆ ನೀಡಿದ ರಾಜಕುಮಾರರ ಗ್ಯಾಂಗ್‌ಗಳಿಗೆ ಮಂಡಿಯ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಬಾಲಿವುಡ್ ನಟಿ ಕಂಗನಾ ರನೌತ್‌ ಶನಿವಾರ ಹೇಳಿದ್ದಾರೆ. ಮಂಡಿ ಲೋಕಸಭಾ ಕ್ಷೇತ್ರದ ಜಾಖರಿ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ತಮ್ಮ ಎದುರಾಳಿ ಕಾಂಗ್ರೆಸ್‌ನ ವಿಕ್ರಮಾದಿತ್ಯ ಸಿಂಗ್ ವಿರುದ್ಧ ರಾಂಪುರದ ರಾಜಕುಮಾರ ಎಂದು ಕರೆದು ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಕಂಗನಾ ಅವರ ಬಗ್ಗೆ, ‘ಅವರಿಗೆ ಬುದ್ಧಿ ನೀಡುವಂತೆ ನಾನು ಭಗವಾನ್ ರಾಮನನ್ನು ಪ್ರಾರ್ಥಿಸುತ್ತೇನೆ. ಚುನಾವಣೆಯಲ್ಲಿ ಸೋತು ದೇವ ಭೂಮಿ ಹಿಮಾಚಲದಿಂದ ಬಾಲಿವುಡ್‌ಗೆ ಶುದ್ಧವಾಗಿ ಹಿಂತಿರುಗುತ್ತಾರೆ ಎಂದು ಭಾವಿಸುತ್ತೇನೆ’ ಎಂದು ವಿಕ್ರಮಾದಿತ್ಯ ಸಿಂಗ್‌ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಂಗನಾ, ‘ನಾನು ಚಿತ್ರರಂಗದಲ್ಲಿ ಕೆಲಸ ಮಾಡಿ ಬಂದಿರುವ ಕಾರಣ ನನ್ನನ್ನು ಅಶುದ್ಧ ಎಂದು ಹೇಳುತ್ತಿದ್ದಾರೆ. ಚಲನಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ನಾನು ನನ್ನ ಕುಟುಂಬಕ್ಕೆ ನೆರವಾದೆ. ಒಡಹುಟ್ಟಿದವರಿಗೆ ಶಿಕ್ಷಣ ಕೊಡಿಸಿದೆ. ಆಸಿಡ್ ದಾಳಿಗೆ ಬಲಿಯಾದ ಸಹೋದರಿಗೆ ಚಿಕಿತ್ಸೆ ನೀಡಿದೆ. ರಾಜ್ಯವೇ ಹೆಮ್ಮೆ ಪಡುವಂತೆ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.