ಇಂಡಿಯಾ ಮೈತ್ರಿಕೂಟದ ಗೆಲುವು ಪ್ರಧಾನಿ ಹುದ್ದೆಯ ಜಗಳಕ್ಕೆ ಕಾರಣವಾಗಲಿದೆ: ಅಮಿತ್ ಶಾ ಝಂಜರ್ಪುರ್ (ಬಿಹಾರ): ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಪ್ಪಿಯಾದರೂ ‘ಇಂಡಿಯಾ’ ಮೈತ್ರಿಕೂಟ ಗೆಲುವು ಸಾಧಿಸಿದರೆ, ಪ್ರಧಾನ ಮಂತ್ರಿ ಸ್ಥಾನಕ್ಕಾಗಿ ಮೈತ್ರಿಕೂಟದ ಉನ್ನತ ನಾಯಕರಲ್ಲಿ ಜಗಳಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬಿಹಾರದ ಝಂಜರ್ಪುರ್‌ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಎಂ. ಕೆ ಸ್ಟಾಲಿನ್‌, ಶರದ್‌ ಪವಾರ್‌, ಲಾಲು ಪ್ರಸಾದ್‌ ಮತ್ತು ಮಮತಾ ಬ್ಯಾನರ್ಜಿಯಂತಹ ನಾಯಕರು ಪ್ರತಿ ವರ್ಷ ಪ್ರಧಾನಿ ಹುದ್ದೆಗೆ ಸರದಿಯಂತೆ ಒಪ್ಪಿಕೊಳ್ಳಬಹುದು. ಇನ್ನೂಳಿದ ಅವಧಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಆಡಳಿತ ನಡೆಸಬೇಕು ಅಷ್ಟೇ’ ಎಂದು ಟೀಕಿಸಿದ್ದಾರೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾದರೆ ಬಿಹಾರ ಸೇರಿದಂತೆ ಇಡೀ ದೇಶದಲ್ಲಿನ ಭ್ರಷ್ಟಾಚಾರ ತೊಡೆದು ಹಾಕಲಿದ್ದಾರೆ ಹಾಗೂ ಜಾತೀಯತೆಯನ್ನು ನಿರ್ಮೂಲನೆಗೊಳಿಸಲಿದ್ದಾರೆ ಎಂದು ಶಾ ಹೇಳಿದರು. ಪ್ರಧಾನಿ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಆದರೆ, ತಪ್ಪಿಯಾದರೂ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಏನಾಗಬಹುದು. ಯಾರು ಪ್ರಧಾನ ಮಂತ್ರಿ ಆಗಲಿದ್ದಾರೆ. ಸ್ಟಾಲಿನ್‌, ಶರದ್‌ ಪವಾರ್‌, ಮಮತಾ ಬ್ಯಾನರ್ಜಿ ಅಥವಾ ರಾಹುಲ್‌ ಗಾಂಧಿ ಇವರಲ್ಲಿ ಯಾರು? ವರ್ಷಕ್ಕೆ ಒಬ್ಬರಂತೆ ಪ್ರಧಾನ ಮಂತ್ರಿ ಸ್ಥಾನವನ್ನು ಅವರು ಹಂಚಿಕೊಳ್ಳುವರು. ಇದು ದೇಶದ ಆಡಳಿತವನ್ನು ನಡೆಸುವ ರೀತಿಯೇ ಎಂದು ಪ್ರಶ್ನಿಸಿದ್ದಾರೆ. ದೇಶ ಬಲಿಷ್ಠ ಪ್ರಧಾನ ಮಂತ್ರಿಯನ್ನು ಬಯಸುತ್ತದೆಯೇ ಹೊರತು ದುರ್ಬಲ ಪ್ರಧಾನ ಮಂತ್ರಿಯನಲ್ಲ ಎಂದು ಶಾ ಹೇಳಿದ್ದಾರೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ತಮ್ಮ ಮಗನನ್ನು (ರಾಹುಲ್‌ ಗಾಂಧಿ) ಪ್ರಧಾನ ಮಂತ್ರಿ ಮಾಡುವುದೊಂದೇ ಏಕೈಕ ಗುರಿ. ಅದೇ ರೀತಿ ಲಾಲು ಪ್ರಸಾದ್‌ ಅವರು ತಮ್ಮ ಮಗ ತೇಜಸ್ವಿ ಯಾದವ್‌ ಅವರನ್ನು ಬಿಹಾರ ಮುಖ್ಯಮಂತ್ರಿ ಮಾಡಬೇಕೆಂದು ಬಯಸುತ್ತಾರೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ಮತ್ತು ಆರ್‌ಜೆಡಿ ವರಿಷ್ಠರು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ ಅವರಿಗೆ ಯಾವುದೇ ಗೌರವ ಸಲ್ಲಿಸಲಿಲ್ಲ. ಆದರೆ, ಠಾಕೂರ್‌ ಅವರ ಕೊಡುಗೆಯನ್ನು ಗುರುತಿಸಿ ಅವರಿಗೆ ಭಾರತ ರತ್ನ ನೀಡುವ ಮೂಲಕ ಬಿಜೆಪಿ ಗೌರವಿಸಿದೆ ಎಂದು ಅವರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.