ಚುನಾವಣೋತ್ತರ ಸಮೀಕ್ಷೆಗಳ ಕುರಿತು ಬಿಜೆಪಿ ಸುಳ್ಳುಗಳ ಬಗ್ಗೆ ಎಚ್ಚರ ಇರಲಿ: ಅಖಿಲೇಶ್ ಲಖನೌ: ಬಿಜೆಪಿಯ ಸುಳ್ಳುಗಳ ಬಗ್ಗೆ ಮತ್ತು ಅದರ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಎಚ್ಚರದಿಂದ ಇರುವಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ‌‌ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಈ ಬಗ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ನಾನು ನಿಮಗೆ ಬಹುಮುಖ್ಯವಾದ ಮನವಿ ಮಾಡಿಕೊಳ್ಳುತ್ತಿದ್ದೇನೆ. ನೀವೆಲ್ಲ ಶನಿವಾರದ ಮತದಾನದ ಬಗ್ಗೆ, ಮತದಾನದ ನಂತರದ ದಿನಗಳ ಬಗ್ಗೆ, ಮತಎಣಿಕೆ ಮುಗಿಯುವವರೆಗೆ ಮತ್ತು ಗೆಲುವಿನ ಪತ್ರ ಸಿಗುವವರೆಗೆ ಸಂಪೂರ್ಣವಾಗಿ ಎಚ್ಚರಿಕೆಯಿಂದ, ಜಾಗ್ರತೆಯಿಂದ ಇರಬೇಕು. ಬಿಜೆಪಿಯಿಂದ ಹಾದಿ ತಪ್ಪದಿರಿ’ ಎಂದು ಉಲ್ಲೇಖಿಸಿದ್ದಾರೆ. ‘ನಾನು ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ, ಬಿಜೆಪಿಯು ತನ್ನ ಮಾಧ್ಯಮ ಗುಂಪಿನ ಮೂಲಕ ಬೇರೆ ಬೇರೆ ಸುದ್ದಿ ವಾಹಿನಿಗಳಲ್ಲಿ ಪಕ್ಷ 300 ಸ್ಥಾನ ಗಳಿಸಿದೆ ಎಂದು ಸಂಪೂರ್ಣ ಸುಳ್ಳು ಸುದ್ದಿಯನ್ನು ಹರಡಲು ಆರಂಭಿಸುತ್ತದೆ. ಚುನಾವಣೆಯಲ್ಲಿ ಹೇಗೂ ‘ಇಂಡಿಯಾ’ ಒಕ್ಕೂಟ ಗೆದ್ದು ಸರ್ಕಾರ ರಚನೆ ಮಾಡುತ್ತದೆಯಾದ್ದರಿಂದ ಎರಡು ಮೂರು ದಿನಗಳ ಮಟ್ಟಿಗೆ ಈ ರೀತಿ ಸುಳ್ಳು ಹಬ್ಬಿಸಿ ಬಿಜೆಪಿ ಏನು ತಾನೇ ಸಾಧಿಸುತ್ತದೆ ಎಂದು ನಿಮಗೆ ಅನಿಸಬಹುದು. ನಿಮ್ಮ ಎದೆಗುಂದಿಸುವುದು ಅವರ ತಂತ್ರವಾಗಿದೆ. ಹಾಗೆ ಮಾಡಿದಾಗ ನಿಮ್ಮ ಕುತೂಹಲ ಕಡಿಮೆ ಆಗಿ, ಮತಎಣಿಕೆಯ ದಿನ ನೀವು ಎಚ್ಚರಿಕೆಯಿಂದ ಇರಲ್ಲ’ ಎಂದು ಹೇಳಿದ್ದಾರೆ. ‘ಚಂಡೀಗಢದಲ್ಲಿ ಕ್ಯಾಮರಾಗಳ ಮುಂದೆಯೇ ನಕಲಿ ಮತದಾನ ಮಾಡುವ ಧೈರ್ಯ ತೋರಿದವರು ಅವರು. ಹಾಗಾಗಿ ನೀವು ಬಿಜೆಪಿಯ ಚುನಾವಣೋತ್ತರ ಸಮೀಕ್ಷೆಗಳಿಂದ ಪ್ರಭಾವಿತರಾಗಬೇಡಿ. ನಿಮ್ಮ ಆತ್ಮವಿಶ್ವಾಸ ಕಾಪಾಡಿಕೊಳ್ಳಿ ಮತ್ತು ಗಟ್ಟಿಯಾಗಿ ನಿಲ್ಲಿ’ ಎಂದು ಸೂಚಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.