ಗುಜರಾತ್‌ ಗೇಮ್‌ ಜೋನ್‌ ಅಗ್ನಿ ದುರಂತ: ಎಸಿಬಿ ತನಿಖೆ ಶುರು ರಾಜ್‌ಕೋಟ್‌: ಮಕ್ಕಳು ಸೇರಿದಂತೆ 27 ಜನರ ಸಾವಿಗೆ ಕಾರಣವಾದ ಮೇ 25ರಂದು ನಡೆದ ರಾಜ್‌ಕೋಟ್‌ ಟಿಆರ್‌ಪಿ ಗೇಮ್‌ ಜೋನ್ ಅಗ್ನಿ ದುರಂತ ಪ್ರಕರಣದ ತನಿಖೆಯನ್ನು ಗುಜರಾತ್‌ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಕೈಗೆತ್ತಿಕೊಂಡಿದೆ. ಈ ಪ್ರಕರಣದಲ್ಲಿ ಬಂಧಿಸಲಾಗಿರುವ ಅಧಿಕಾರಿಗಳ ಕಚೇರಿಗಳು, ಮನೆಗಳು ಮತ್ತು ಅವರಿಗೆ ಸೇರಿದ ಕೆಲವು ಸ್ಥಳಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಹಲವು ದಾಖಲೆಪತ್ರಗಳನ್ನು ವಶಪಡಿಸಿಕೊಂಡರು. ರಾಜ್‌ಕೋಟ್ ನಗರ ಯೋಜನಾ ಅಧಿಕಾರಿ (ಟಿಪಿಒ) ಎಂ.ಡಿ. ಸಗಾಥಿಯಾ, ಸಹಾಯಕ ಟಿಪಿಒಗಳಾದ ಮುಕೇಶ್ ಮಕ್ವಾನಾ ಮತ್ತು ಗೌತಮ್ ಜೋಷಿ, ಕಲಾವಾದ್ ರಸ್ತೆ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಗಿದ್ದ ರೋಹಿತ್ ವಿಗೋರಾ ಅವರನ್ನು ರಾಜ್‌ಕೋಟ್ ಪೊಲೀಸರು ಗುರುವಾರ ಬಂಧಿಸಿದ ನಂತರ, ಬಂಧಿತರ ವಿರುದ್ಧ ಎಸಿಬಿ ತನಿಖೆಗೆ ಮುಂದಾಗಿದೆ. ‘ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಇಲ್ಲಿಯವರೆಗೆ ನಡೆಸಿದ ಶೋಧದಲ್ಲಿ ಅಪರಾಧ ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯಗಳು ಕಂಡುಬಂದಿಲ್ಲ’ ಎಂದು ರಾಜ್‌ಕೋಟ್ ವಲಯದ ಎಸಿಬಿಯ ಸಹಾಯಕ ನಿರ್ದೇಶಕ ಕೆ.ಎಚ್. ಗೋಹಿಲ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.