ಅಗ್ನಿಪಥ ಯೋಜನೆ |ಚು. ಆಯೋಗ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದ್ದು ತಪ್ಪು: ಚಿದಂಬರಂ ನವದೆಹಲಿ: ಅಗ್ನಿಪಥ ಯೋಜನೆಯನ್ನು ರಾಜಕೀಯಗೊಳಿಸದಂತೆ ಚುನಾವಣಾ ಆಯೋಗವು ಕಾಂಗ್ರೆಸ್‌ಗೆ ನಿರ್ದೇಶನ ನೀಡಿರುವುದು ‘ದೊಡ್ಡ ತಪ್ಪು’ ಎಂದು ಪಕ್ಷದ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ. ಸರ್ಕಾರದ ನೀತಿಯನ್ನು ಟೀಕಿಸುವ ಹಕ್ಕು ವಿರೋಧ ಪಕ್ಷಗಳಿಗೆ ಇದೆ ಎಂದು ಅವರು ಗುರುವಾರ ಪ್ರತಿಪಾದಿಸಿದರು. ಜಾತಿ, ಸಮುದಾಯ, ಭಾಷೆ ಮತ್ತು ಧರ್ಮದ ಆಧಾರದಲ್ಲಿ ಚುನಾವಣಾ ಪ್ರಚಾರ ನಡೆಸದಿರುವಂತೆ ಆಯೋಗವು ಗುರುವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಸೇನೆಗೆ ಸಂಬಂಧಿಸಿದ ವಿಷಯಗಳನ್ನು ರಾಜಕೀಯಗೊಳಿಸಬಾರದು ಎಂದು ಕಾಂಗ್ರೆಸ್‌ಗೆ ನಿರ್ದೇಶಿಸಿತ್ತು. ‘ರಾಜಕೀಯಗೊಳಿಸುವುದು’ ಎಂಬ ಮಾತಿನ ಅರ್ಥ ಏನು? ಅಗ್ನಿಪಥ ಎಂಬುದು ಸರ್ಕಾರ ಜಾರಿಗೊಳಿಸಿರುವ ಒಂದು ಯೋಜನೆ. ಸರ್ಕಾರದ ನೀತಿಗಳನ್ನು ಟೀಕಿಸುವುದು ವಿರೋಧ ಪಕ್ಷಗಳ ಹಕ್ಕು. ನಾವು ಅಧಿಕಾರಕ್ಕೆ ಬಂದರೆ ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸುತ್ತೇವೆ’ ಎಂದು ಹೇಳಿದರು. ‘ಅಗ್ನಿವೀರ’ರು ನಾಲ್ಕು ವರ್ಷಗಳ ಬಳಿಕ ಕೆಲಸ ಕಳೆದುಕೊಳ್ಳುವರು. ಅವರಿಗೆ ಯಾವುದೇ ಪಿಂಚಣಿ ಸೌಲಭ್ಯವೂ ಇರುವುದಿಲ್ಲ. ಸೇನೆ ಕೂಡಾ ಈ ಯೋಜನೆಯನ್ನು ವಿರೋಧಿಸಿತ್ತು. ಆದರೆ ಸರ್ಕಾರವು ಈ ಯೋಜನೆಯನ್ನು ಬಲವಂತವಾಗಿ ಹೇರಿವುದು ತಪ್ಪು’ ಎಂದು ಅಭಿಪ್ರಾಯಪಟ್ಟರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.