: ಛತ್ತೀಸಗಢದಲ್ಲಿ 33 ನಕ್ಸಲರ ಶರಣಾಗತಿ ಛತ್ತೀಸಗಢ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 33 ನಕ್ಸಲರು, ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ಹಿರಿಯ ಅಧಿಕಾರಿಗಳ ಮುಂದೆ ಶನಿವಾರ ಶರಣಾಗತರಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಯಾದವ್ ತಿಳಿಸಿದರು. ‘ಮಾವೋವಾದಿಗಳ ಗಂಗಲೂರು ಪ್ರದೇಶ ಸಮಿತಿಯಡಿ ಸಕ್ರಿಯರಾಗಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಶರಣಾದ 33 ಮಂದಿಯು, ಪೊಲೀಸರ ಪುನರ್ವಸತಿ ನೀತಿಯಿಂದ ಪ್ರಭಾವಿತರಾಗಿದ್ದಾರೆ’ ಎಂದು ಹೇಳಿದರು. ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ (ಪಿಎಲ್‌ಜಿಎ) ಸದಸ್ಯ ರಾಜು ಹೇಮ್ಲ ಅಲಿಯಾಸ್ ಠಾಕೂರ್ (35), ಮಾವೋವಾದಿಗಳ ಪ್ಲಟೂನ್‌ ನಂಬರ್ ಒಂದರ ಸದಸ್ಯ ಸಮೋ ಕರ್ಮ ಪತ್ತೆಗೆ ತಲಾ ₹ 2 ಲಕ್ಷ ಹಾಗೂ ಮಾವೋವಾದಿಗಳ ರೆವಲ್ಯೂನಷರಿ ಪಾರ್ಟಿ ಕಮಿಟಿಯ (ಆರ್‌ಪಿಸಿ) ಜನತಾ ಸರ್ಕಾರ್‌ನ ಮುಖ್ಯಸ್ಥ ಸುಧ್ರು ಪುನೆಮ್ ಪತ್ತೆಗಾಗಿ ₹ 1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಈ ಮೂವರು ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶರಣಾದ ನಕ್ಸಲರಿಗೆ ತಲಾ ₹ 25 ಸಾವಿರ ನೀಡಲಾಗಿದ್ದು, ಸರ್ಕಾರದ ನೀತಿಯಂತೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 109 ನಕ್ಸಲರು ಮುಖ್ಯವಾಹಿನಿಗೆ ಮರಳಿದ್ದು, 189 ಮಂದಿಯನ್ನು ಬಂಧಿಸಲಾಗಿದೆ ಎಂದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.