ರಾಜಸ್ಥಾನ | ಮುಸ್ಲಿಮರ ಮೀಸಲಾತಿ ಪರಿಶೀಲನೆ: ಸಚಿವ ಅವಿನಾಶ್‌ ಗೆಹಲೋತ್‌ ಜೈಪುರ: ‘ರಾಜಸ್ಥಾನದಲ್ಲಿ ಮುಸ್ಲಿಂ ಸಮುದಾಯದ ಕೆಲ ವರ್ಗಗಳಿಗೆ ಇತರ ಹಿಂದುಳಿದ ವರ್ಗಗಳ (ಒಬಿಸಿ) ಅಡಿ ಕಲ್ಪಿಸಿರುವ ಮೀಸಲಾತಿಯನ್ನು ಪುನರ್‌ಪರಿಶೀಲಿಸಲಾಗುವುದು’ ಎಂದು ರಾಜ್ಯದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್‌ ಗೆಹಲೋತ್‌ ಅವರು ಶನಿವಾರ ಹೇಳಿದ್ದಾರೆ. ‘ಓಲೈಕೆ ರಾಜಕಾರಣದ ಭಾಗವಾಗಿ 1997ರಿಂದ 2013ರ ವರೆಗೆ ಇಸ್ಲಾಂ ಧರ್ಮದ 14 ಪಂಗಡಗಳು ಒಬಿಸಿ ಅಡಿ ಮೀಸಲಾತಿ ಕಲ್ಪಿಸಲಾಗಿದೆ. ಧರ್ಮದ ಆಧಾರವಾಗಿ ಯಾರಿಗೂ ಮೀಸಲಾತಿ ಕಲ್ಪಿಸುವಂತಿಲ್ಲ ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಬರೆದಿದ್ದಾರೆ. ಹಾಗಿದ್ದರೂ ಮುಸ್ಲಿಮರಿಗೆ ಕಾಂಗ್ರೆಸ್‌ ಪಕ್ಷವು ಮೀಸಲಾತಿ ಕಲ್ಪಿಸಿದೆ‘ ಎಂದು ಅವಿನಾಶ್‌ ಗೆಹಲೋತ್‌ ಅವರು ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ. ‘ಈ ಕುರಿತು ಪರಿಶೀಲನೆ ನಡೆಸಲು ನಮ್ಮ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಿದೆ. ಸಂಬಂಧಪಟ್ಟ ಇಲಾಖೆಯು ಈ ಕುರಿತು ಪರಿಶೀಲಿಸುತ್ತಿದೆ‘ ಎಂದು ಹೇಳಿದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥ ಗೋವಿಂದ್‌ ಸಿಂಗ್‌ ದೋತಸ್ರ ಅವರು, ಕೇಂದ್ರ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿರಿಸುವ ಬದಲು ಬಿಜೆಪಿಯು ಹಿಂದೂ– ಮುಸ್ಲಿಂ ರಾಜಕಾರಣದಲ್ಲಿ ತೊಡಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.