ರಾಜ್‌ಕೋಟ್‌ ಗೇಮ್‌ ಝೋನ್ ದುರಂತ: 6 ಅಧಿಕಾರಿಗಳ ಅಮಾನತು ಅಹಮದಾಬಾದ್‌: 27 ಮಂದಿಯ ಸಾವಿಗೆ ಕಾರಣವಾದ ರಾಜ್‌ಕೋಟ್‌ ಗೇಮ್‌ ಝೋನ್‌ ಅಗ್ನಿ ದುರಂತ ಪ್ರಕರಣದ ಸಂಬಂಧ 6 ಅಧಿಕಾರಿಗಳನ್ನು ಅಮಾನತು ಮಾಡಿ ಗುಜರಾತ್ ಸರ್ಕಾರ ಆದೇಶಿಸಿದೆ. ‘ಅಗತ್ಯ ಅನುಮೋದನೆ ಇಲ್ಲದೆ ಗೇಮ್ ಝೋನ್ ಕಾರ್ಯಾಚರಿಸಲು ಅವಕಾಶ ನೀಡಿದ್ದು ಅಧಿಕಾರಿಗಳ ನಿರ್ಲಕ್ಷ್ಯ’ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್‌ಕೋಟ್‌ ಪಾಲಿಕೆಯ ನಗರ ಯೋಜನೆ ವಿಭಾಗದ ಸಹ ಎಂಜಿನಿಯರ್‌ ಜೈದೀಪ್ ಚೌಧರಿ, ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿ ಗೌತಮ್‌ ಜೋಶಿ, ರಾಜ್‌ಕೋಟ್‌ ರಸ್ತೆ ಹಾಗೂ ಕಟ್ಟಡ ವಿಭಾಗದ ಉಪ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಎಂ.ಆರ್.ಸುಮಾ ಹಾಗೂ ‍ಪರಾಸ್ ಕೊತಿಯಾ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ವಿ.ಆರ್ ಪಟೇಲ್ ಹಾಗೂ ಎನ್‌.ಐ ರಾಥೋಡ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಶಿಕ್ಷಿಸಬೇಕು ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಹೇಳಿದ ಮರುದಿನವೇ ಈ ಕ್ರಮ ಜರುಗಿಸಲಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಅಧಿಕಾರಿಗಳ ತಲೆದಂಡವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.