ಅಗ್ನಿ ದುರಂತ: ಏಳು ಅಧಿಕಾರಿಗಳ ಅಮಾನತು ರಾಜ್‌ಕೋಟ್‌: ರಾಜ್‌ಕೋಟ್‌ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಏಳು ಮಂದಿ ಅಧಿಕಾರಿಗಳ ಅಮಾನತಿಗೆ ಗುಜರಾತ್ ಸರ್ಕಾರ ಸೋಮವಾರ ಆದೇಶಿಸಿದೆ. ‘ಅಗತ್ಯ ಅನುಮತಿಗಳನ್ನು ಪಡೆಯದಿದ್ದರೂ ಗೇಮ್‌ ಜೋನ್‌ ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟು ನಿರ್ಲಕ್ಷ್ಯ ತೋರಿದ್ದಕ್ಕಾಗಿ’ ಅಧಿಕಾರಿಗಳನ್ನು ಹೊಣೆ ಮಾಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ರಾಜ್‌ಕೋಟ್‌ ಮಹಾನಗರ ಪಾಲಿಕೆಯ ನಗರ ಯೋಜನಾ ಇಲಾಖೆಯ ಸಹಾಯಕ ಎಂಜಿನಿಯರ್ ಜೈದೀಪ್ ಚೌಧರಿ, ಪಾಲಿಕೆಯ ಸಹಾಯಕ ನಗರ ಯೋಜಕ ಗೌತಮ್ ಜೋಷಿ, ರಾಜ್‌ಕೋಟ್‌ ರಸ್ತೆ ಮತ್ತು ಕಟ್ಟಡಗಳ ಇಲಾಖೆಯ ಉಪ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಎಂ.ಆರ್. ಸುಮಾ ಮತ್ತು ಪಾರಸ್ ಕೋಥಿಯಾ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವಿ.ಆರ್. ಪಟೇಲ್ ಮತ್ತು ಎನ್‌.ಐ. ರಾಥೋಡ್, ಪಾಲಿಕೆಯ ಕಲಾವಾದ್ ರಸ್ತೆ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ರೋಹಿತ್ ವಿಗೋರಾ ಅವರನ್ನು ಅಮಾನನತು ಮಾಡಲಾಗಿದೆ. ಟಿಆರ್‌‍ಪಿ ಗೇಮ್‌ ಜೋನ್ ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ನಿರಾಕ್ಷೇಪಣಾ ಪತ್ರ ಪಡೆಯದೆ ಕಾರ್ಯ ನಿರ್ವಹಿಸುತ್ತಿದ್ದರೂ ವಿಗೋರಾ ಅವರು ಆ ಮನರಂಜನಾ ಕೇಂದ್ರದ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಬೇಜವಾಬ್ದಾರಿಯಿಂದ ವರ್ತಿಸಿದರು ಎಂದು ಅಮಾನತು ಆದೇಶದಲ್ಲಿ ಹೇಳಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.