ಪುಣೆ: ಪೋಶೆ ಕಾರು ಅಪಘಾತ ಸ್ಥಳದಲ್ಲಿ ಕಾಂಗ್ರೆಸ್‌ನಿಂದ ಪ್ರಬಂಧ ಸ್ಪರ್ಧೆ ಆಯೋಜನೆ ಪುಣೆ: 17 ವರ್ಷದ ಬಾಲಕನೊಬ್ಬ ಅತಿವೇಗದಿಂದ ಕಾರು ಚಲಾಯಿಸಿದ್ದರಿಂದ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದ ಸ್ಥಳದಲ್ಲಿ ಯುವ ಕಾಂಗ್ರೆಸ್‌ ಭಾನುವಾರ ಪ್ರಬಂಧ ಬರೆಯುವ ಸ್ಪರ್ಧೆಯನ್ನು ಆಯೋಜಿಸಿತ್ತು. ಅಂದಾಜು 100 ಯುವಕ–ಯುವತಿಯರು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ‘ನನ್ನ ನೆಚ್ಚಿನ ಕಾರು’, ‘ಒಂದು ವೇಳೆ ನನ್ನ ತಂದೆ ಬಿಲ್ಡರ್‌ ಆಗಿದ್ದರೆ’ ಹಾಗೂ ‘ಮದ್ಯಪಾನದಿಂದಾಗುವ ದುಷ್ಪರಿಣಾಮಗಳು’ ಎಂಬ ವಿಷಯಗಳ ಮೇಲೆ ಪ್ರಬಂಧ ಬರೆಯಲು ಸೂಚಿಸಲಾಗಿತ್ತು. ಕಸ್ಬಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರವೀಂದ್ರ ಧಂಗೇಕರ್ ಸಹ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸ್ಪರ್ಧೆ ಆಯೋಜಿಸಿದ್ದ ಸ್ಥಳದಲ್ಲಿ ಭಾರಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಇಲ್ಲಿನ ಕಲ್ಯಾಣನಗರ ಪ್ರದೇಶದಲ್ಲಿ ಮೇ 19ರಂದು ಈ ಅಪಘಾತ ಸಂಭವಿಸಿತ್ತು. ಬಾಲಕ ಚಲಾಯಿಸುತ್ತಿದ್ದ ಎನ್ನಲಾದ ಪೋಶೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಐಟಿ ಉದ್ಯೋಗಿಗಳು ಮೃತಪಟ್ಟಿದ್ದರು. ಈ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬಾಲಕ ಮದ್ಯ ಸೇವನೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ, ಬಾಲಕನ ತಂದೆ ಹಾಗೂ ಉದ್ಯಮಿ ವಿಶಾಲ್ ಅಗರವಾಲ್‌, ತಾತ ಸುರೇಂದ್ರ ಅಗರವಾಲ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನನ್ನು ಜೂನ್‌ 5ರ ವರೆಗೆ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.