ರಾಜ್‌ಕೋಟ್ ಬೆಂಕಿ ದುರಂತ | ಇನ್ನೊಬ್ಬ ಪಾಲುದಾರನ ಬಂಧನ; 5ಕ್ಕೇರಿದ ಬಂಧಿತರ ಸಂಖ್ಯೆ ಅಹಮದಾಬಾದ್‌: 27 ಮಂದಿಯ ಸಾವಿಗೆ ಕಾರಣವಾಗಿದ್ದ ರಾಜ್‌ಕೋಟ್‌ ‘ಟಿಆರ್‌ಪಿ ಗೇಮ್‌ ಝೋನ್‌‘ ಅಗ್ನಿ ದುರಂತ ಸಂಬಂಧ ಇನ್ನೊಬ್ಬ ಉದ್ಯಮ ಪಾಲುದಾರನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಇದರೊಂದಿಗೆ ಘಟನೆ ಸಂಬಂಧ ಬಂಧಿತರ ಸಂಖ್ಯೆ ಐದಕ್ಕೇರಿದೆ. ಗೇಮ್‌ ಝೋನ್ ಕಾರ್ಯಾಚರಿಸುತ್ತಿದ್ದ ರೇಸ್‌ವೇ ಎಂಟರ್‌ಪ್ರೈಸಸ್‌ನ ಪಾಲುದಾರ ಕೃತಿಸಿನ್ಹಾ ಜಡೇಜಾ ಎಂಬವರನ್ನು ರಾಜ್‌ಕೋಟ್–ಕಲವಾಡ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ಬಂಧಿಸಲಾಗಿದೆ ಎಂದು ರಾಜ್‌ಕೋಟ್‌ ಡಿಸಿಪಿ ಪಾರ್ಥ್ರಸಿನ್ಹ ಗೊಹ್ಲಿ ತಿಳಿಸಿದ್ದಾರೆ. ಟಿಆರ್‌ಪಿ ಗೇಮ್‌ ಝೋನ್‌ ಆರು ಪಾಲುದಾರರಲ್ಲಿ ಒಬ್ಬರಾಗಿರುವ ಜಡೇಜಾ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ದೂರು ದಾಖಲಿಸಲಾಗಿತ್ತು. ‘ಕೃತಿಸಿನ್ಹಾ ಜಡೇಜಾ ಅವರನ್ನು ಕಳೆದ ರಾತ್ರಿ ರಾಜ್‌ಕೋಟ್‌ ಸಮೀಪ ನಾವು ಬಂಧಿಸಿದ್ದೇವೆ. ಅಲ್ಲಿಗೆ ಘಟನೆಯಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ 6 ಮಂದಿಯ ಪೈಕಿ, ಪ್ರಕಾಶ್ ಹಿರನ್‌ ಅವರು ಬೆಂಕಿ ಅವಘಡದಲ್ಲಿ ಸಾವಿಗೀಡಾಗಿದ್ದಾರೆ. ಡಿಎನ್‌ಎ ಮಾದರಿ ಸಂಬಂಧಿಕರೊಂದಿಗೆ ತಾಳೆಯಾಗಿದ್ದು, ಅವರು ಮೃತಪಟ್ಟಿದ್ದು ನಿಕ್ಕಿಯಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಹಿಂದೆ ಪ್ರಕರಣ ಸಂಬಂಧ ಯುವರಾಜ್‌ ಸಿನ್ಹ ಸೋಲಂಕಿ, ರಾಹುಲ್ ರಾಥೋಡ್‌. ಧವಲ್ ಥಕ್ಕರ್‌, ನತಿನ್ ಜೈನ್ ಎಂಬವರನ್ನು ಬಂಧಿಸಲಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.