ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಶಂಖ ಊದಿ: ಸುವೇಂದು ಅಧಿಕಾರಿ ಬಶೀರ್‌ಹಾಟ್ (ಪಶ್ಚಿಮ ಬಂಗಾಳ): ಬಶೀರ್‌ಹಾಟ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಂದೇಶ್‌ಖಾಲಿ ಮತ್ತು ಇತರ ಪ್ರದೇಶಗಳಲ್ಲಿ ಮತದಾನ ನಡೆಯುವ ಜೂನ್‌ 1ಕ್ಕೂ ಮುನ್ನ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಶಂಖ ಊದುವ ಮೂಲಕ ಸಂಕೇತ ನೀಡಿ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮಹಿಳೆಯರಿಗೆ ಗುರುವಾರ ಕರೆ ನೀಡಿದರು. ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಆಡಳಿತ ಪಕ್ಷಕ್ಕೆ ಮತ ಹಾಕುವಂತೆ ನಿವಾಸಿಗಳನ್ನು ಬೆದರಿಸಲು ಟಿಎಂಸಿ ನಿಯಂತ್ರಿತ ರಾಜ್ಯ ಪೊಲೀಸರು ಮತ್ತು ಇತರರು ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕ ಕುನಾಲ್‌ ಘೋಷ್‌, ‘ಇಡೀ ಚುನಾವಣೆಯು ಚುನಾವಣಾ ಆಯೋಗದ ಕಣ್ಗಾವಲಿನಲ್ಲಿ ನಡೆಯುತ್ತಿದೆ. ಹೀಗಿರುವಾಗ ಟಿಎಂಸಿ ಮತ್ತು ರಾಜ್ಯ ಪೊಲೀಸರ ವಿರುದ್ಧ ಸುಳ್ಳುಗಳನ್ನು ಹರಡುವುದು ಸರಿಯಲ್ಲ. ಬಶೀರ್‌ಹಾಟ್‌ ಫಲಿತಾಂಶ ಏನಾಗುತ್ತದೆ ಎಂಬುದು ಬಿಜೆಪಿಗೆ ತಿಳಿದಿದೆ. ಹೀಗಾಗಿ ಅಪಪ್ರಚಾರದಲ್ಲಿ ತೊಡಗಿದೆ’ ಎಂದು ಟೀಕಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.