ಮೂವರು ಲೆಫ್ಟಿನೆಂಟ್‌ ಕರ್ನಲ್‌ಗಳ ವಿರುದ್ಧ ಎಫ್‌ಐಆರ್ ಕುಪ್ವಾರ: ಕುಪ್ವಾರ ಪೊಲೀಸ್‌ ಠಾಣೆ ಮೇಲೆ ಹಿಂಸಾತ್ಮಕ ದಾಳಿ ನಡೆಸಿದ್ದ ಆರೋಪದಲ್ಲಿ ಸೇನೆಯ ಮೂವರು ಲೆಫ್ಟಿನೆಂಟ್‌ ಕರ್ನಲ್‌ಗಳು ಮತ್ತು ಇತರ 13 ಮಂದಿ ವಿರುದ್ದ ಕೊಲೆಗೆ ಯತ್ನ, ದರೋಡೆ ಮತ್ತು ಇನ್ನಿತರ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಸೇನೆಯ ಯೋಧರೊಬ್ಬರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಇದರಿಂದ ಕುಪಿತರಾಗಿದ್ದ ಸೇನಾ ಸಿಬ್ಬಂದಿ ಪೊಲೀಸ್‌ ಠಾಣೆ ಮೇಲೆ ಮೇ 28ರ ರಾತ್ರಿ ದಾಳಿ ನಡೆಸಿದ್ದರು. ಉದ್ವಿಗ್ನರ ತಂಡವನ್ನು ಲೆಫ್ಟಿನಂಟ್‌ ಕರ್ನಲ್‌ಗಳಾದ ಅಂಕಿತ್‌ ಸೂದ್‌, ರಾಜೀವ್‌ ಚೌಹಾನ್‌ ಮತ್ತು ನಿಖಿಲ್‌ ಅವರು ಮುನ್ನಡೆಸಿದ್ದರು. ಪೊಲೀಸ್‌ ಠಾಣೆಯನ್ನು ವಶಕ್ಕೆ ತೆಗೆದುಕೊಂಡಿದ್ದ ಅವರು, ಪೊಲೀಸ್‌ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 186 (ಸಾರ್ವಜನಿಕ ಸೇವಾ ಸಿಬ್ಬಂದಿ ಸಿಬ್ಬಂದಿಗೆ ಕರ್ತವ್ಯ ನಿರ್ವಹಣೆಗೆ ತಡೆ), 332 (ಸಾರ್ವಜನಿಕ ಸೇವಾ ಸಿಬ್ಬಂದಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡುವುದು), 307 (ಕೊಲೆಗೆ ಯತ್ನ), 342 (ಕಾನೂನುಬಾಹಿರ ಬಂಧನ) ಮತ್ತು 147 (ಗಲಭೆ ಎಬ್ಬಿಸಿದ್ದಕ್ಕೆ ಶಿಕ್ಷೆ) ಅಡಿ ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೇ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಇನ್ನಿತರ ಪ್ರಕರಣಗಳನ್ನೂ ಇವರ ವಿರುದ್ಧ ದಾಖಲಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.