| ಕೊನೆಯ ಹಂತದಲ್ಲಿ ಶೇ 59ರಷ್ಟು ಮತದಾನ ನವದೆಹಲಿ: ಲೋಕಸಭಾ ಚುನಾವಣೆಯ ಕಡೆಯ ಹಂತದ ಮತದಾನದಲ್ಲಿ ಅರ್ಹ ಮತದಾರರ ಪೈಕಿ ಶೇಕಡ 59.15ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. ಚುನಾವಣಾ ಆಯೋಗದ ಆ್ಯಪ್‌ನಲ್ಲಿ ರಾತ್ರಿ 8 ಗಂಟೆಗೆ ಇದ್ದ ಮಾಹಿತಿ ಪ್ರಕಾರ ಇಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ. ‍ಪಶ್ಚಿಮ ಬಂಗಾಲದ ಸಂದೇಶ್‌ಖಾಲಿ ಪ್ರದೇಶದಲ್ಲಿ ಟಿಎಂಟಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಇವಿಎಂಗಳಲ್ಲಿ ದೋಷ ಕಂಡುಬಂದ ಹಾಗೂ ಇವಿಎಂ ದಾಖಲೆ ತಿರುಚಲು ಯತ್ನಿಸಲಾಗಿದೆ ಎಂಬ ದೂರುಗಳು ದಾಖಲಾಗಿವೆ. ಏಳು ರಾಜ್ಯಗಳಲ್ಲಿ, ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 57 ಲೋಕಸಭಾ ಸ್ಥಾನಗಳಿಗೆ ಶನಿವಾರ ಮತದಾನ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ವಾರಾಣಸಿ ಕ್ಷೇತ್ರ ಕೂಡ ಇವುಗಳಲ್ಲಿ ಒಂದು. ಒಡಿಶಾ ವಿಧಾನಸಭೆಯ 42 ಕ್ಷೇತ್ರಗಳಿಗೆ ಮತದಾನ ನಡೆಯಿತು. ಹಿಮಾಚಲ ಪ್ರದೇಶದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಿತು. ಚುನಾವಣಾ ಅಕ್ರಮದ ಆರೋಪದ ಕಾರಣಕ್ಕೆ ಸಂದೇಶ್‌ಖಾಲಿಯಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ನಡೆಯಿತು. ಟಿಎಂಸಿಯ ಗೂಂಡಾಗಳು ಮತದಾರರಿಗೆ ಹಕ್ಕು ಚಲಾಯಿಸಲು ಬಿಡುತ್ತಿಲ್ಲ ಎಂದು ಬಿಜೆಪಿ ಅಭ್ಯರ್ಥಿ ರೇಖಾ ಪಾತ್ರಾ ಆರೋಪಿಸಿದರು. ಬಿಜೆಪಿಯ ಗೂಂಡಾಗಳು ಹಾಗೂ ರೇಖಾ ಅವರು ಚುನಾವಣೆಯ ಸಂದರ್ಭದಲ್ಲಿ ವಾತಾವರಣ ಹಾಳುಗೆಡವಲು ಯತ್ನಿಸುತ್ತಿದ್ದಾರೆ ಎಂದು ಟಿಎಂಸಿ ಆರೋಪಿಸಿತು. ಬಸಂತಿ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಟಿಎಂಸಿ, ಬಿಜೆಪಿ ಬೆಂಬಲಿಗರ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು ಮತ್ತು ಅಶ್ರುವಾಯು ಶೆಲ್ ಸಿಡಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.