ಶತ್ರು ಭೈರವಿ ಯಾಗ: ಡಿಕೆಶಿ ಹೇಳಿಕೆ ಭಕ್ತರಲ್ಲಿ ಆತಂಕ ಮೂಡಿಸಿದೆ–ಕೇರಳ ಅರ್ಚಕ ಅಳಲು ಕಣ್ಣೂರು: ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರಾಣಿ ಬಲಿ ನಡೆದಿದೆ ಎಂಬ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯು ಭಕ್ತರಲ್ಲಿ ಆತಂಕ ಮೂಡಿಸಿದೆ ಎಂದು ದೇವಸ್ಥಾನದ ಅರ್ಚಕ ತಿಳಿಸಿದ್ದಾರೆ. ಪ್ರಾಣಿಗಳ ಬಲಿಯನ್ನು ಒಳಗೊಳ್ಳುವ ‘ಶತ್ರು ಭೈರವಿ ಯಾಗ’ ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದಿಲ್ಲ. ಆದರೆ, ಆ ಪ್ರದೇಶದ ಹತ್ತಿರದ ಖಾಸಗಿ ಸ್ಥಳದಲ್ಲಿ ಯಾಗ ನಡೆದಿದೆ ಎಂಬುದಾಗಿ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ ಹೊರತಾಗಿಯೂ, ಈ ಕುರಿತ ವಿವಾದಗಳು ಮುಂದುವರಿದಿವೆ. ಈ ಕುರಿತು ಭಾನುವಾರ ಪ್ರತಿಕ್ರಿಯಿಸಿದ ರಾಜರಾಜೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕ ಇ.ಪಿ. ಕುಬೇರನ್ ನಂಬೂದಿರಿಪಾದ್, ‘ಡಿ.ಕೆ.ಶಿವಕುಮಾರ್ ಹೇಳಿರುವಂತೆ ದೇವಸ್ಥಾನದಲ್ಲಿ ಏನಾದರೂ ನಡೆದಿದೆಯೇ ಎಂದು ಹಲವು ಭಕ್ತರು ಪ್ರಶ್ನಿಸುತ್ತಿದ್ದಾರೆ. ಅನಗತ್ಯ ವಿವಾದದಿಂದಾಗಿ ಇಂತಹ ಪರಿಸ್ಥಿತಿ ಉದ್ಭವವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ಈ ವಿಚಾರವು ಭಕ್ತರಲ್ಲಿ ಆತಂಕ ಹುಟ್ಟಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ದೇವಸ್ಥಾನದ ಹೆಸರಿಗೆ ಹಾನಿ ಉಂಟಾಗುವ ಪರಿಸ್ಥಿತಿ ಎದುರಾಗಲಿದೆ’ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.