ಸಿಬ್ಬಂದಿ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಬಾಂಗ್ಲಾ ದುಷ್ಕರ್ಮಿಗಳು ನವದೆಹಲಿ: ಭಾರತೀಯ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಕಾನ್‌ಸ್ಟೆಬಲ್‌ವೊಬ್ಬರ ಮೇಲೆ ಬಾಂಗ್ಲಾದೇಶದ ದುಷ್ಕರ್ಮಿಗಳ ಗುಂಪೊಂದು ಬಿದಿರಿನ ಕೋಲು, ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅವರನ್ನು ಗಡಿಯುದ್ದಕ್ಕೂ ಎಳೆದಾಡಲು ಪ್ರಯತ್ನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಬಿಎಸ್‌ಎಫ್ ಕಾನ್‌ಸ್ಟೆಬಲ್‌ ಭೋಲೆ ಅವರು ಹಲ್ಲೆಗೊಳಗಾಗಿದ್ದಾರೆ. ಅವರು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಔಟ್‌ಪೋಸ್ಟ್ ಕರ್ತವ್ಯ ನಿರ್ವಹಿಸುತ್ತಿದ್ದರು. ದುಷ್ಕರ್ಮಿಗಳು ಭಾನುವಾರ ಮಧ್ಯಾಹ್ನ ಅಕ್ರಮವಾಗಿ ಅಂತರರಾಷ್ಟ್ರೀಯ ಗಡಿಯನ್ನು ದಾಟುವ ಮೂಲಕ ಸಕ್ಕರೆ ಕಳ್ಳಸಾಗಣೆ ಮಾಡುವ ಉದ್ದೇಶದಿಂದ ಫೆನ್ಸಿಂಗ್ ಗೇಟ್ ಬಳಿ ಜಮಾಯಿಸಿದ್ದರು. ಇದೇ ಸಂದರ್ಭದಲ್ಲಿ ದುಷ್ಕರ್ಮಿಗಳು ಭೋಲೆ ಮೇಲೆ ಹಲ್ಲೆ ನಡೆಸಿದ್ದಾರೆ. ಜತೆಗೆ ಭೋಲೆ ಅವರನ್ನು ಬಾಂಗ್ಲಾದೇಶದ ಕಡೆಗೆ ಎಳೆಯಲು ಪ್ರಯತ್ನಿಸಿದ್ದಾರೆ ಎಂದು ಬಿಎಸ್‌ಎಫ್ ಹೇಳಿದೆ. ದುಷ್ಕರ್ಮಿಗಳು ನಿಂದನಾತ್ಮಕ, ಅಸಭ್ಯ ಸನ್ನೆಗಳೊಂದಿಗೆ ಕರ್ತವ್ಯದಲ್ಲಿದ್ದ ಭೋಲೆ ಅವರನ್ನು ಪ್ರಚೋದಿಸಿದ್ದಾರೆ. ಬಳಿಕ ಬಿದಿರಿನ ಕೋಲು, ಕಬ್ಬಿಣದ ರಾಡ್‌ಗಳಿಂದ ಭೋಲೆ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಭೋಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.