ಫಲಿತಾಂಶ ಬಂದು 15 ದಿನಗಳಲ್ಲಿ ಉದ್ಧವ್,ಮೋದಿ ಸರ್ಕಾರಕ್ಕೆ ಸೇರಲಿದ್ದಾರೆ: ರವಿ ರಾಣಾ ಅಮರಾವತಿ(ಮಹಾರಾಷ್ಟ್ರ): ಲೋಕಸಭಾ ಚುನಾವಣೆಯ ಫಲಿತಾಂಶ ಬಂದು 15 ದಿನಗಳ ಬಳಿಕ ಶಿವಸೇನಾ(ಯುಬಿಟಿ) ವರಿಷ್ಠ ಉದ್ಧವ್ ಠಾಕ್ರೆ ಮೋದಿ ಸರ್ಕಾರ ಸೇರಲಿದ್ದಾರೆ ಎಂದು ಶಾಸಕ ರವಿ ರಾಣಾ ತಿಳಿಸಿದ್ದಾರೆ. ರವಿ ರಾಣಾ ಪತ್ನಿ ನವನೀತ್ ರಾಣಾ ಅವರು ಅಮರಾವತಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆಯಾಗಿದ್ದು, ಈ ಬಾರಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ. ನಟಿಯೂ ಆಗಿರುವ ನವನೀತ್ ರಾಣಾ 2019ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ‘ಮೋದಿ ಅವರ ಬಗ್ಗೆ ಉದ್ಧವ್ ಠಾಕ್ರೆ ಮತ್ತು ಸಂಜಯ್ ರಾವುತ್ ಅವರು ಮಾತನಾಡುತ್ತಿರುವುದನ್ನು ನೋಡಿದರೆ ಫಲಿತಾಂಶ ಬಂದು 15 ದಿನಗಳಲ್ಲಿ ಉದ್ಧವ್, ಮೋದಿ ಸರ್ಕಾರದ ಭಾಗವಾಗಲಿದ್ದಾರೆ ಎಂದು ವಿಶ್ವಾಸದಿಂದ ಹೇಳಬಲ್ಲೆ. ಏಕೆಂದರೆ, ಇದು ಮೋದಿ ಯುಗ ಎಂಬುದು ಅವರಿಗೆ ತಿಳಿದಿದೆ’ಎಂದು ರಾಣಾ ಹೇಳಿದ್ದಾರೆ. ಜೂನ್4ರ ಮತ ಎಣಿಕೆ ವೇಳೆ ಮಹಾ ವಿಕಾಸ್ ಅಗಾಡಿಯ ನಾಯಕರು ರಕ್ತದೊತ್ತಡದ ಮಾತ್ರೆಗಳನ್ನು ತಮ್ಮ ಬಳಿ ಇಟ್ಟುಕೊಂಡಿರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ. ಅಮರಾವತಿಯಲ್ಲಿ ತಮ್ಮ ಪತ್ನಿ ನವನೀತ್ ರಾಣಾ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಹನುಮಾನ್ ಚಾಲೀಸಾ ಪಠಣದ ವಿಚಾರದಲ್ಲಿ ರಾಣಾ ದಂಪತಿ ಈ ಹಿಂದಿನ ಮಹಾ ವಿಕಾಸ್ ಅಗಾಡಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.