ನೀತಿ ಸಂಹಿತೆ ಉಲ್ಲಂಘನೆ: ಎಫ್‌ಐಆರ್‌ನಿಂದ ಶಾ, ಕಿಶನ್‌ ರೆಡ್ಡಿ ಹೆಸರಿಗೆ ಕೊಕ್ ಹೈದರಾಬಾದ್: ಚುನಾವಣಾ ಪ್ರಚಾರಕ್ಕಾಗಿ ಬಾಲಕರನ್ನು ಬಳಸಲಾಗಿದೆ ಎಂಬ ಆರೋಪ ಕುರಿತು ಮೇ ತಿಂಗಳಲ್ಲಿ ದಾಖಲಿಸಲಾಗಿದ್ದ ಎಫ್‌ಐಆರ್‌ನಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ, ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ.ಕಿಶನ್‌ ರೆಡ್ಡಿ ಅವರ ಹೆಸರು ಕೈಬಿಡಲಾಗಿದೆ. ಮೇ 1ರಂದು ಚುನಾವಣಾ ರ‍್ಯಾಲಿಯಲ್ಲಿ ಬಾಲಕರನ್ನು ಬಳಸಲಾಗಿತ್ತು ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ (ಟಿಪಿಸಿಸಿ) ಉಪಾಧ್ಯಕ್ಷ ಜಿ.ನಿರಂಜನ್ ಅವರು, ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ (ಸಿಇಒ) ದೂರು ನೀಡಿದ್ದರು. ನಗರ ಪೊಲೀಸರಿಗೆ ದೂರು ಕಳುಹಿಸಿದ್ದ ಸಿಇಒ ವಸ್ತುಸ್ಥಿತಿ ವರದಿ ಕೇಳಿದ್ದರು. ಅದರಂತೆ ಶಾ ಮತ್ತು ಕಿಶನ್‌ ರೆಡ್ಡಿ, ಹೈದರಾಬಾದ್‌ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಮಾಧವಿ ಲತಾ, ಶಾಸಕ ಟಿ.ರಾಜಾಸಿಂಗ್, ಬಿಜೆಪಿ ನಾಯಕ ಟಿ.ಯಮನ್‌ ಸಿಂಗ್ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಇದರಲ್ಲಿ ಶಾ ಮತ್ತು ಕಿಶನ್ ರೆಡ್ಡಿ ಪಾತ್ರವಿಲ್ಲ ಎಂಬುದು ಗೊತ್ತಾಗಿದೆ. ಹೀಗಾಗಿ ಕೈಬಿಡಲಾಗಿದೆ. ಈ ಪ್ರಕರಣ ಸಂಬಂಧ ಕಳೆದ ವಾರ ಕೋರ್ಟ್‌ಗೆ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಮೂವರ ವಿರುದ್ದ ಐಪಿಸಿ ಸೆಕ್ಷನ್ 188ರ ಅನ್ವಯ ಪ್ರಕರಣ ಮುಂದುವರಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.