ಜನರ ತೀರ್ಮಾನ ಗೌರವಿಸಿ ಎಂಜಿನಿಯರ್‌ ರಶೀದ್‌ನನ್ನು ಬಿಡುಗಡೆಗೊಳಿಸಿ: ಮುಫ್ತಿ ಆಗ್ರಹ ಶ್ರೀನಗರ: ಕೇಂದ್ರ ಸರ್ಕಾರವು ಜನರ ತೀರ್ಮಾನವನ್ನು ಗೌರವಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಗೆಲವು ಸಾಧಿಸಿರುವ ಶೇಖ್‌ ಅಬ್ದುಲ್‌ ರಶೀದ್‌ ಅಲಿಯಾಸ್‌ ಎಂಜಿನಿಯರ್‌ ರಶೀದ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ. ರಶೀದ್‌ ಭಯೋತ್ಪಾದಕರಿಗೆ ಹಣ ನೀಡಿದ್ದ ಪ್ರಕರಣದಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇವರು ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್‌ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಓಮರ್‌ ಅಬ್ದುಲ್ಲ ಅವರ ವಿರುದ್ಧ 2 ಲಕ್ಷ ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮುಫ್ತಿ ‘ಸಂಸತ್ ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಮಿಯಾನ್ ಅಲ್ತಾಫ್, ಅಗಾ ರುಹುಲ್ಲಾ, ಇಂಜಿನಿಯರ್ ರಶೀದ್ ಮತ್ತು ಹನೀಫಾ ಜಾನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರತ ಸರ್ಕಾರವು ಜನರ ತೀರ್ಪು ಗೌರವಿಸಬೇಕು ಮತ್ತು ಇಂಜಿನಿಯರ್ ರಶೀದ್ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಬರೆದುಕೊಂಡಿದ್ದಾರೆ. ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಕೂಡ ರಶೀದ್‌ ಅವರ ಬಿಡುಗಡೆಗೆ ಒತ್ತಾಯಿಸಿದ್ದಾರೆ. ರಶೀದ್ ಸದ್ಯ ತಿಹಾರ್‌ ಜೈಲಿನಲ್ಲಿದ್ದಾರೆ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾರರು ಮತಚಲಾಯಿಸಲು ಪರಿಗಣಿಸಿದ ಅಂಶಗಳ ಬಗ್ಗೆ ಪಟ್ಟಿ ಮಾಡಿದ್ದಾರೆ. ಜೈಲು ಎನ್ನವುದು ಅತ್ಯಂತ ಶಕ್ತಿಯುತ ಭಾವನಾತ್ಮಕ ಜಾಗವಾಗಿದ್ದು, ಸಾವಿರಾರು ಕಾಶ್ಮೀರಿ ಯುವಕರು ಇಲ್ಲಿ ದಿನಕಳೆಯುತ್ತಿದ್ದಾರೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಸೂಚಿಯನ್ನು ಧಾರ್ಮಿಕತೆ ಪ್ರಭಾವ ಬೀರಿದೆ ಹಾಗೂ ಕಾಶ್ಮೀರಿ ಯುವಕರು ಮತ್ತು ಮಹಿಳೆಯರು ಆದ್ಯತೆಯ ಪಕ್ಷಗಳಿಗೆ ಮತ್ತು ಆದ್ಯತೆಯ ವ್ಯಕ್ತಿಗಳಿಗೆ ಮತ ಹಾಕಿದ್ದಾರೆ ಎಂದು ಇಲ್ತಿಜಾ ಮುಫ್ತಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.