ಸಂಸತ್ ಭದ್ರತಾ ಲೋಪ ಪ್ರಕರಣ: 6 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆ ನವದೆಹಲಿ: ಸಂಸತ್ ಭವನ ಭದ್ರತಾ ಲೋಪ ‍ಪ್ರಕರಣದ 6 ಮಂದಿ ಆರೋಪಿಗಳ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಇಲ್ಲಿನ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆರೋಪಿಗಳಾದ ಡಿ. ಮನೋರಂಜನ್, ಲಲಿತ್ ಝಾ, ಅಮೊಲ್ ಶಿಂಧೆ, ಮಹೇಶ್ ಕುಮಾವತ್, ಸಾಗರ್ ಶರ್ಮಾ ಮತ್ತು ನೀಲಂ ಆಜಾದ್ ವಿರುದ್ಧ ಯುಎಪಿಎ ಅಡಿಯಲ್ಲಿ 1000 ಪುಟಗಳ ಆರೋಪಪಟ್ಟಿಯನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಹರ್ದೀಪ್ ಕೌರ್ ಅವರ ಮುಂದೆ ಸಲ್ಲಿಸಲಾಯಿತು. ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅಂತಿಮ ವರದಿಯನ್ನು ಸಲ್ಲಿಸಲಾಗಿದೆ. ಆರೋಪಿಗಳ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಎಲ್ಲಾ ಆರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 15 ರವರೆಗೆ ವಿಸ್ತರಿಸಿದೆ. ಕಳೆದ ವರ್ಷ ಡಿಸೆಂಬರ್‌ 13ರಂದು ಸಂಸತ್‌ಗೆ ನುಗ್ಗಿದ್ದ ಇಬ್ಬರು ಆಗಂತುಕರು ಲೋಕಸಭೆ ಹಾಲ್‌ಗೆ ‍ಜಿಗಿದು ಸ್ಮೋಕ್‌ ಕ್ಯಾನ್‌ಗಳನ್ನು ಹಾರಿಸಿದ್ದರು. ಘಟನೆ ಸಂಬಂಧ ಡಿ. ಮನೋರಂಜನ್, ಲಲಿತ್ ಝಾ, ಅಮೊಲ್ ಶಿಂಧೆ, ಮಹೇಶ್ ಕುಮಾವತ್, ಸಾಗರ್ ಶರ್ಮಾ ಮತ್ತು ನೀಲಂ ಆಜಾದ್ ಎಂಬವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.