ದೆಹಲಿ | ಆಹಾರ ಸಂಸ್ಕರಣಾ ಘಟಕದಲ್ಲಿ ಬೆಂಕಿ: 3 ಸಾವು, 6 ಮಂದಿಗೆ ಗಾಯ ನವದೆಹಲಿ: ಇಲ್ಲಿನ ನರೇಲಾ ಕೈಗಾರಿಕಾ ಪ್ರದೇಶದ ಆಹಾರ ಸಂಸ್ಕರಣ ಘಟಕವೊಂದರಲ್ಲಿ ಶನಿವಾರ ನಸುಕಿನಲ್ಲಿ ಬೆಂಕಿ ಅವಘಡ ನಡೆದಿದ್ದು, ಮೂವರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಆಹಾರ ಸಂಸ್ಕರಣಾ ಘಟಕ ‘ಶ್ಯಾಮ್‌ ಕೃಪಾ ಫುಡ್ಸ್ ಪ್ರೈವೆಟ್‌ ಲಿಮಿಟೆಡ್‌’ನಲ್ಲಿ ಬೆಂಕಿ ಅವಘಡ ಸಂಭವಿದ್ದರ ಬಗ್ಗೆ ನಸುಕು 3.35ಕ್ಕೆ ಪೊಲೀಸರಿಗೆ ಕರೆ ಬಂದಿದೆ. ಘಟಕವನ್ನು ಬೆಂಕಿ ಆವರಿಸಿಕೊಂಡಿದ್ದು, ಕೆಲ ಕಾರ್ಮಿಕರು ಸಿಲುಕಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ 14 ಅಗ್ನಿ ಶಾಮಕ ವಾಹನಗಳು ಕಾರ್ಯಚರಣೆ ನಡೆಸಿ, ಮಧ್ಯಾಹ್ನದ ವೇಳೆಗೆ ಬೆಂಕಿ ನಂದಿಸಲಾಗಿದೆ ಎಂದು ದೆಹಲಿ ಅಗ್ನಿ ಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ. ಒಂಬತ್ತು ಮಂದಿಯನ್ನು ರಕ್ಷಿಸಿ ಅವರನ್ನು ನರೇಲಾದ ಸತ್ಯವಾದಿರಾಜ ಹರೀಶ್‌ ಚಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪೈಕಿ ಶ್ಯಾಮ್‌ (24), ರಾಮ್‌ ಸಿಂಗ್‌ (30) ಹಾಗೂ ಬೀರ್‌ಪಾಲ್ (42) ಸಾವಿಗೀಡಾಗಿದ್ದು, ಉಳಿದವರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ ಎಂದ ಅವರು ಮಾಹಿತಿ ನೀಡಿದ್ದಾರೆ. ಪುಷ್ಪೆಂದರ್ (26), ಆಕಾಶ್‌ (19), ಮೋಹಿತ್ ಕುಮಾರ್‌ (21), ರವಿ ಕುಮಾರ್ (19), ಮೋನು (25) ಹಾಗೂ ಲಾನು (32) ಎಂಬವರು ಗಾಯಯೊಂಡಿದ್ದು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ಯಾಸ್ ಸೋರಿಕೆಯಾಗಿ ಘಟನೆ ನಡೆದಿದೆ. ಬೆಂಕಿ ಆವರಿಸುತ್ತಿದ್ದಂತೆಯೇ ಕಂಪ್ರೆಸರ್‌ ಬಿಸಿ ಹೆಚ್ಚಳವಾಗಿ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.