ನಕಾರಾತ್ಮಕ ರಾಜಕೀಯದ ಯುಗಾಂತ್ಯ: ಅಖಿಲೇಶ್ ಯಾದವ್‌ ಲಖನೌ: ನಕಾರಾತ್ಮಕ ರಾಜಕೀಯದ ಯುಗ ಅಂತ್ಯವಾಗಿದೆ. ಜನರ ಸಮಸ್ಯೆಗಳು ಮತ್ತು ಕಾಳಜಿಗಳಿಗೆ ಜಯ ಸಿಕ್ಕಿದೆ ಎಂದು ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶನಿವಾರ ವಿಶ್ಲೇಷಿಸಿದ್ದಾರೆ. ಉತ್ತರ ಪ್ರದೇಶದ ಲಖನೌನಲ್ಲಿರುವ ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ‘ಒಂದು ಅರ್ಥದಲ್ಲಿ ಇದು ಇಂಡಿಯಾ ಮೈತ್ರಿಕೂಟದ ಜಯ. ನಮ್ಮ ಪಿಡಿಎ (ಹಿಂದುಳಿದ ವರ್ಗ, ದಲಿತ ಹಾಗೂ ಅಲ್ಪಸಂಖ್ಯಾತ) ತಂತ್ರ ಕೆಲಸ ಮಾಡಿದೆ. ಚುನಾವಣೆಯಲ್ಲಿ ನಮ್ಮದು ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷಕ್ಕೆ ಜನರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ’ ಎಂದು ಅವರು ನುಡಿದಿದ್ದಾರೆ. ‘ಇದೇ ವೇಳೆ ಸಮಾಜವಾದಿ ಪಕ್ಷದ ಜವಾಬ್ದಾರಿಯೂ ಹೆಚ್ಚಳವಾಗಿದೆ. ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸುವುದು, ಅವರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಅಭಿಪ್ರಾಯ ಮಂಡಿಸುವುದು ನಮ್ಮ ಆದ್ಯತೆ. ಜನರಿಗೆ ಸೇವೆ ಸಲ್ಲಿಸುವುದು ಲೋಕಸಭೆಯಲ್ಲಿ ನಮ್ಮ ಗರಿಷ್ಠ ಆದ್ಯತೆಯಾಗಿರಲಿದೆ’ ಎಂದು ಅವರು ಹೇಳಿದ್ದಾರೆ. ನಕಾರಾತ್ಮಕ ರಾಜಕೀಯದ ಯುಗ ಅಂತ್ಯವಾಗಿ, ಸಕಾರಾತ್ಮಕ ರಾಜಕೀಯದ ಯುಗ ಆರಂಭವಾಗಿದೆ. ಜನರ ಸಮಸ್ಯೆಗಳು ಮತ್ತು ಕಾಳಜಿಗಳಿಗೆ ಜಯ ಸಿಕ್ಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅಂತ್ಯಗೊಂಡ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 37 ಕ್ಷೇತ್ರಗಳನ್ನು ಸಮಾಜವಾದಿ ಪಕ್ಷ ಗೆದ್ದುಕೊಂಡಿತ್ತು. ಮಿತ್ರಪಕ್ಷ ಕಾಂಗ್ರೆಸ್‌ 6 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು. ಬಿಜೆಪಿಗೆ 33 ಸೀಟುಗಳು ದಕ್ಕಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.