ಡೆಹ್ರಾಡೂನ್‌ನಲ್ಲಿ ಸೈನ್ಯ ಧಾಮ ನಿರ್ಮಾಣಕ್ಕೆ ಉತ್ತರಾಖಂಡ ಹೈಕೋರ್ಟ್‌ ತಡೆ ನೈನಿತಾಲ್‌: ಡೆಹ್ರಾಡೂನ್‌ನಲ್ಲಿ ಸೈನ್ಯ ಧಾಮ ನಿರ್ಮಿಸಲು ಕಂದಾಯ ಇಲಾಖೆ ಹೊರಡಿಸಿದ್ದ ಅಧಿಸೂಚನೆಗೆ ಉತ್ತರಾಖಂಡ ಹೈಕೋರ್ಟ್‌ ತಡೆ ನೀಡಿದೆ. ಭೂಮಾಲೀಕರ ಅನುಮತಿ ಪಡೆಯದೆ ಅಥವಾ ಅವರಿಗೆ ಯಾವುದೇ ಪರಿಹಾರವನ್ನು ನೀಡದೆ ಸೈನ್ಯ ಧಾಮ ಅಥವಾ ಹುತ್ಮಾತ ಯೋಧರಿಗೆ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ನ್ಯಾಯಾಧೀಶ ಮನೋಜ್‌ ಕುಮಾರ್‌ ತಿವಾರಿ ಅವರ ಏಕಸದಸ್ಯ ಪೀಠವು 2023ರ ಆಗಸ್ಟ್‌ 21ರಂದು ಹೊರಡಿಸಲಾಗಿದ್ದ ಅಧಿಸೂಚನೆಗೆ ತಡೆ ನೀಡಿದೆ. ಈ ಕುರಿತು ಉತ್ತರಿಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಆದೇಶಿಸಿದೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಮಂಡಳಿಯು ಡೆಹ್ರಾಡೂನ್‌ನ ಮಸ್ಸೂರಿ ರಸ್ತೆಯಲ್ಲಿರುವ ಗುನಿಯಾಲ್‌ ಗ್ರಾಮದ ಖಾಸಗಿ ಭೂಮಿಯಲ್ಲಿ ಸೈನ್ಯ ಧಾಮವನ್ನು ನಿರ್ಮಿಸುತ್ತಿದೆ. ಆದರೆ, ಮಂಡಳಿಯು ಭೂಮಾಲೀಕರಿಂದ ಅನುಮತಿ ಪಡೆದಿಲ್ಲ ಅಥವಾ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಡೆಹ್ರಾಡೂನ್‌ ನಿವಾಸಿ ಸೀಮಾ ಕನೋಜಿಯಾ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್‌ 18ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ. 2021ರ ಜನವರಿ 23ರಂದು ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರು ಸೈನ್ಯ ಧಾಮಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.