ಸಿಕ್ಕಿಂ | ಸಂಕಷ್ಟಕ್ಕೆ ಸಿಲುಕಿರುವ 1,200 ಪ್ರವಾಸಿಗರ ರಕ್ಷಣೆಗೆ ಕ್ರಮ ಗ್ಯಾಂಗ್ಟಾಕ್: ಸಿಕ್ಕಿಂನಲ್ಲಿ ಸಿಕ್ಕಿಹಾಕಿಕೊಂಡಿರುವ 1,200 ಪ್ರವಾಸಿಗರನ್ನು ಆದಷ್ಟು ಬೇಗನೇ ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರಿ ಮಳೆಯಿಂದಾಗಿ ಹಲವಡೆ ಭೂಕುಸಿತ ಉಂಟಾಗಿದ್ದು, ರಸ್ತೆ ಸಂಪರ್ಕ ಕಡಿದುಕೊಂಡಿದೆ. ಸಿಕ್ಕಿಂ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವ ಟಿರ್ಸಿಂಗ್‌ ತೆಂಡುಪ್‌ ಭುಟಿಯಾ ಅವರ ಮೇಲ್ವಿಚಾರಣೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯಲಿದೆ. ಹವಾಮಾನ ಸುಧಾರಿಸಿದರೆ ಏರ್‌ಲಿಫ್ಟ್‌ ಮತ್ತು ರಸ್ತೆ ಮಾರ್ಗಗಳ ಮೂಲಕ ಲಾಚುಂಗ್‌ನಿಂದ ಪ್ರವಾಸಿಗರನ್ನು ಸ್ಥಳಾಂತರಿಸುವ ಕಾರ್ಯ ಇಂದಿನಿಂದ ಪ್ರಾರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಸತತ ಮಳೆಯಿಂದಾಗಿ ಮಂಗನ್ ಜಿಲ್ಲೆಯಲ್ಲಿ ರಸ್ತೆ ಸಂಪರ್ಕ ಕಡಿದುಕೊಂಡ ಪರಿಣಾಮ ಕಳೆದ ಒಂದು ವಾರದಿಂದ 15 ವಿದೇಶಿಯರು ಸೇರಿದಂತೆ ಸುಮಾರು 1,215 ಪ್ರವಾಸಿಗರು ಲಾಚುಂಗ್‌ ನಗರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಿ. ಎಸ್‌ ರಾವ್‌ ತಿಳಿಸಿದ್ದಾರೆ. ನಿರಂತರ ಮಳೆಯಿಂದಾಗಿ ಮಂಗನ್‌ ಜಿಲ್ಲೆಯಲ್ಲಿ ಉಂಟಾದ ಭಾರಿ ಭೂಕುಸಿತದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಅನೇಕ ಆಸ್ತಿ–ಪಾಸ್ತಿ ನಷ್ಟವಾಗಿದೆ. ಭೂಕುಸಿತದಿಂದಾಗಿ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ಹಲವು ಪ್ರದೇಶಗಳಲ್ಲಿ ಆಹಾರ, ವಿದ್ಯುತ್‌ ಸರಬರಾಜು ಸೇರಿದಂತೆ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಗಳು ಉಂಟಾಗಿವೆ. ಅವಘಡದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಜಿಲ್ಲಾಡಳಿತವು ₹4 ಲಕ್ಷ ಪರಿಹಾರ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.